ನಾವು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದರೂ ಅಂತರಂಗದಲ್ಲಿ ತೆರೆಮರೆಯ ಮಾತುಕತೆ ನಡೆಯುತ್ತಿದೆ. ಅಪ್ಪ, ಮಕ್ಕಳ ರಾಜಕೀಯದಿಂದ ಜೆಡಿಎಸ್ನಲ್ಲಿದ್ದ ಸಿದ್ದರಾಮಯ್ಯ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೇಲೆ ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಹಾವು, ಮುಂಗುಸಿಯ ದ್ವೇಷವಿತ್ತು. ಆದರೆ ಈಗ ಮತ್ತೆ ಬಿಬಿಎಂಪಿ ಅಧಿಕಾರ ಹಿಡಿಯುವುದಕ್ಕೆ ಅಪವಿತ್ರ ಮೈತ್ರಿಗೆ ಮುಂದಾಗಿದ್ದಾರೆ. ಬುಧವಾರ ನಡೆದ ಬೆಳವಣಿಗೆಯಲ್ಲಿ 6 ಮಂದಿ ಪಕ್ಷೇತರ ಕಾರ್ಪೊರೇಟರ್ಗಳು ಬಿಜೆಪಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಆರು ಪಕ್ಷೇತರ ಕಾರ್ಪೋರೇಟರ್ಗಳು ನಾಪತ್ತೆಯಾಗಿ ಕೇರಳದ ರೆಸಾರ್ಟ್ನಲ್ಲಿ ಅಡಗಿದ್ದಾರೆ. ಈಗ ಬಿಜೆಪಿ ಹೇಗಾದರೂ ಮಾಡಿ ಬಿಬಿಎಂಪಿ ಅಧಿಕಾರದ ಗದ್ದುಗೆ ಹಿಡಿಯಲು ಪ್ರತಿತಂತ್ರ ರೂಪಿಸುತ್ತಿದೆ. ಕೊನೆಗೆ ಯಾರಿಗೆ ಗದ್ದುಗೆ ದಕ್ಕುತ್ತದೋ, ಇನ್ನೆಷ್ಟು ರಂಪ, ರಾದ್ದಾಂತಗಳು ನಡೆಯುತ್ತದೋ ಕಾದು ನೋಡಬೇಕು.