ಉಕ್ಕಿನ ಸೇತುವೆ ತಡೆಯಾಜ್ಞೆ ತೆರವು ಬಳಿಕ ಆರಂಭ : ಸಚಿವ ಕೆ.ಜೆ. ಜಾರ್ಜ್

ಶುಕ್ರವಾರ, 2 ಡಿಸೆಂಬರ್ 2016 (10:30 IST)
ಸಾರ್ವಜನಿಕರ ಹಿತದೃಷ್ಟಿ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ ಮತ್ತು ಇತರೆ ಬಡಾವಣೆಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಉಕ್ಕಿನ ಸೇತುವೆಯನ್ನು ನಿರ್ಮಿಸುವ ಯೋಜನೆಗೆ ಸರ್ಕಾರ ಬದ್ಧವಾಗಿದೆ. ಸಧ್ಯ ಈ ವಿಚಾರ ರಾಷ್ಟ್ರೀಯ ಹಸಿರು ನ್ಯಾಯಪೀಠದ ಮುಂದೆ ಇದೆ. 
 
ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಅಂತಿಮ ತೀರ್ಮಾನದ ಬಳಿಕ ಮುಂದಿನ ಕ್ರಮ ವಹಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್ ಹೇಳಿದರು. 
 
ಬದಲಿ ನಿವೇಶನಕ್ಕೆ ಕ್ರಮ: ಬೆಂಗಳೂರಿನ ಉತ್ತರ ಮತ್ತು ಪೂರ್ವ ತಾಲೂಕಿನ 16 ಗ್ರಾಮಗಳಲ್ಲಿ ಅರ್ಕಾವತಿ ಬಡಾವಣೆಯಲ್ಲಿ 606 ಎಕರೆ ಪ್ರದೇಶದಲ್ಲಿ 8730 ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಲಾಗಿದೆ. ಇವರಲ್ಲಿ 2970 ಹಂಚಿಕೆದಾರರಿಗೆ ನ್ಯಾಯಾಲಯದ ಆದೇಶದಂತೆ ಅಲ್ಲಿನ ನಿವೇಶನಗಳನ್ನು ನೋಂದಣಿ ಮಾಡಿಕೊಡಲು ಸಾಧ್ಯವಿಲ್ಲ. ಹಂಚಿಕೆದಾರರು ಬಯಸಿದರೆ ಬಡ್ಡಿ ಸಹಿತವಾಗಿ ಅವರ ಹಣ ಮರಳಿಸಲಾಗುವುದು ಅಥವಾ ಬೇರೆ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಲು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ