ಗವಿಯೊಳಗಿನ ಗಂಗಾಧರನಿಗೆ ಸೂರ್ಯಕಿರಣ ಸ್ಪರ್ಶ

ಸಂಕ್ರಾತಿ ಬಂತೆಂದರೆ ಸಾಕು, ಗವಿ ಗಂಗಾಧರೇಶ್ವರ ದೇವಾಲಯಕ್ಕೆ ನುಗ್ಗುವವರೇ ಅಧಿಕರು. ಇದಕ್ಕೆ ಕಾರಣ ಇಲ್ಲದಿಲ್ಲ. ಗುಹೆಯೊಳಗಿನ ಶಿವಲಿಂಗವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಸಂಕ್ರಾತಿ ದಿನದಂದು ಗುಹೆಯೊಳಗಿನ ಶಿವಲಿಂಗದ ಮೇಲೆ ಸೂರ್ಯ ಕಿರಣವು ಬೀಳುವುದೇ ಇಲ್ಲಿನ ವಿಶೇಷತೆ.

ಸುಮಾರು 20,000 ವರ್ಷಗಳ ಇತಿಹಾಸವಿರುವ ಈ ಶಿವಲಿಂಗವು ದಕ್ಷಿಣಾಭಿಮುಖವಾಗಿ ಸ್ವಯಂ ಉದ್ಭವವಾಗಿದೆ. ಇದು ಗೌತಮ ಮುನಿಗಳು ತಪಗೈದ ಪುಣ್ಯಸ್ಥಳವೆಂಬ ಐತಿಹ್ಯವಿದೆ. ಅಲ್ಲದೆ, ಛತ್ರಪತಿ ಶಿವಾಜಿ ಆದೇಶದ ಮೇರೆಗೆ ಈ ದೇವಾಲಯ ಸ್ಥಾಪಿತವಾಗಿದೆ. ಇದರ ಜೀರ್ಣೋದ್ಧಾರವನ್ನು ನಾಡಪ್ರಭು ಕೆಂಪೇಗೌಡರು ಮಾಡಿಸಿದ್ದರು ಎಂಬುದು ಐತಿಹ್ಯ.

ಇದರ ಇನ್ನೊಂದು ವೈಶಿಷ್ಟ್ಯವೆಂದರೆ, ಹೆಚ್ಚಿನೆಡೆ ಪಾರ್ವತಿಯು ಪರಮೇಶ್ವರನ ಎಡಭಾಗದಲ್ಲಿದ್ದರೆ, ಇಲ್ಲಿ ಪಾರ್ವತಿ ಶಿವನ ಬಲಭಾಗದಲ್ಲಿ ನೆಲೆಸಿರುತ್ತಾಳೆ. ದೇಗುಲದ ಬಳಿಯಲ್ಲಿ ಗೋಸಾಯಿ ಮಠದಲ್ಲಿ ಅವಾನಿ ಪೀಠವಿದೆ. ಕಲ್ಲಿನಿಂದ ಕೆತ್ತಲಾದ ಪೀನಪಾನ, ಚಂದ್ರಪಾನ, ಡಮರುಗಳು ವಿಶೇಷವಾಗಿ ಮೂಡಿ ಬಂದಿವೆ.

ಈ ಪ್ರಸಿದ್ಧಿಯನ್ನು ಗಮನಿಸಿ ಹಲವಾರು ಗಣ್ಯವ್ಯಕ್ತಿಗಳು ಭೇಟಿ ಇತ್ತಿದ್ದಾರೆ. ಹರಕೆ ಸಲ್ಲಿಸಿದರೆ ಈಡೇರುವುದು ಶತಸ್ಸಿದ್ಧ ಎನ್ನುವುದು ಅಲ್ಲಿನ ಭಕ್ತರ ಅಂಬೋಣ. ಒಟ್ಟಿನಲ್ಲಿ ಎಲ್ಲಾ ವೈಶಿಷ್ಟ್ಯ ಹೊಂದಿರುವ ಗವಿ ಗಂಗಾಧರೇಶ್ವರ ದೇವಾಲಯ ಅನನ್ಯ ಭಕ್ತಿಯ ತಾಣವಾಗಿ ಪ್ರಸಿದ್ದಿಯನ್ನು ಪಡೆದಿದೆ.

ವೆಬ್ದುನಿಯಾವನ್ನು ಓದಿ