ಬೇಗ ಮದುವೆಯಾಗಲೆಂದು ದೇವಸ್ಥಾನದ ಮೆಟ್ಟಿಲುಗಳಿಗೆ ಜಜ್ಜಿ ಮಗು ಬಲಿ

ಬುಧವಾರ, 26 ಅಕ್ಟೋಬರ್ 2016 (12:18 IST)
ಆಧುನಿಕ ಕಾಲದಲ್ಲೂ ಮೂಢನಂಬಿಕೆಗಳು ಎಷ್ಟೊಂದು ಬೇರೂರಿವೆ ಎಂಬುದಕ್ಕೆ ಸ್ಪಷ್ಟ ದೃಷ್ಟಾಂತವಿದು. ತನಗೆ ಶೀಘ್ರ ಮದುವೆ ಯೋಗ ಬರಲಿ ಎಂದು ಯುವಕನೋರ್ವ ಒಂದುವರೆ ವರ್ಷದ ಪುಟ್ಟ ಮಗುವನ್ನು ದೇವಿಗೆ ಬಲಿ ನೀಡಿದ ಅಮಾನುಷ, ಹೇಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆದಿದೆ.
ಈ ಪೈಶಾಚಿಕ ಕೃತ್ಯ ನಡೆಸಿದವನನ್ನು ಪಶ್ಚಿಮ ದೆಹಲಿಯ ಮೋಹನ್ ಗಾರ್ಡನ್ ನಿವಾಸಿ ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ.
 
ತನಗೆ ಬೇಗ ಮದುವೆಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದ ಆತ ಅದಕ್ಕೆ ಪ್ರತಿಯಾಗಿ ದೇವಿಗೆ ನರಬಲಿ ನೀಡುವುದಾಗಿ ಹರಕೆ ಹೊತ್ತಿದ್ದ. ಅದರಂತೆ ನೆರೆಮನೆಯ ಒಂದುವರೆ ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ ದೇವಿ ಮುಂದೆ ಅತ್ಯಂತ ಕ್ರೂರವಾಗಿ ಅದನ್ನು ಕೊಂದಿದ್ದಾನೆ. ಮೊದಲು ಮಗುವಿನ ಕಾಲಿಗೆ ಹರಿತವಾದ ಆಯುಧದಿಂದ ಚುಚ್ಚಿ ಬಳಿಕ ದೇವಸ್ಥಾನದ ಮೆಟ್ಟಿಲುಗಳಿಗೆ ಆಕೆಯ ತಲೆಯನ್ನು ಜಜ್ಜಿ ಕೊಂದಿದ್ದಾನೆ. 
 
ಆತನ ಹೀನ ಕೃತ್ಯ ಕಂಡ ಜನರು ಓಡಿ ಬಂದು ಮಗುವನ್ನು ಕಾಪಾಡಲು ಯತ್ನಿಸಿದರು. ಆದರೆ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಅದು ಸಾವನ್ನಪ್ಪಿದೆ, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಜನರು ಯಶಸ್ವಿಯಾಗಿದ್ದಾರೆ.
 
ತನ್ನ ತಪ್ಪನ್ನು ಆರೋಪಿ ಒಪ್ಪಿಕೊಂಡಿದ್ದು ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ