ಬಲೂಚಿಸ್ತಾನ್ ಶಾಲಾ ಬಸ್ ಸ್ಫೋಟದಲ್ಲಿ ನಾಲ್ವರು ಸಾವು: ಪಾಕ್‌ ಆರೋಪಕ್ಕೆ ಭಾರತದ ಪ್ರತ್ಯುತ್ತರ

Sampriya

ಬುಧವಾರ, 21 ಮೇ 2025 (19:41 IST)
Photo Courtesy X
ಲಾಹೋರ್‌: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಖುಜ್ಜಾರ್ ಜಿಲ್ಲೆಯಲ್ಲಿ ಶಾಲಾ ಬಸ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಈ ಸ್ಪೋಟದ ಘಟನೆಯ ಬಗ್ಗೆ ಪಾಕ್‌ ಭಾರತದತ್ತ ಬೊಟ್ಟು ಮಾಡಿದೆ. ಆದರೆ, ಪಾಕ್​ ಮಾಡಿರುವ ಆಧಾರರಹಿತ ಆರೋಪಗಳನ್ನು ಭಾರತ ತಿರಸ್ಕರಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಬಾಂಬ್ ದಾಳಿಯನ್ನು ಖಂಡಿಸಿ, ಇದನ್ನು ಭಾರತದ ಬೆಂಬಲಿತ ಭಯೋತ್ಪಾದಕರು ಮಾಡಿರಬಹುದು ಎಂದು ಆರೋಪಿಸಿದ್ದರು.

ಆತ್ಮಾಹುತಿ ಬಾಂಬ್ ದಾಳಿಯಲ್ಲಿ ನಡೆದ ಜೀವಹಾನಿಗೆ ಭಾರತ ಸಂತಾಪ ವ್ಯಕ್ತಪಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖುಜ್ದಾರ್ ಘಟನೆಯಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆಧಾರರಹಿತ ಆರೋಪಗಳನ್ನು ಭಾರತ ತಿರಸ್ಕರಿಸುತ್ತದೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಂಬ ತನ್ನ ಖ್ಯಾತಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಮತ್ತು ತನ್ನದೇ ಆದ ಘೋರ ವೈಫಲ್ಯಗಳನ್ನು ಮರೆಮಾಡಲು, ಪಾಕಿಸ್ತಾನವು ತನ್ನ ಎಲ್ಲಾ ಆಂತರಿಕ ಸಮಸ್ಯೆಗಳಿಗೆ ಭಾರತವನ್ನು ದೂಷಿಸುವುದು ಎರಡನೇ ಸ್ವಭಾವವಾಗಿದೆ. ಜಗತ್ತನ್ನು ಮೋಸಗೊಳಿಸುವ ಈ ಪ್ರಯತ್ನ ವಿಫಲವಾಗುವುದು ಖಚಿತ ಎಂದು ಜೈಸ್ವಾಲ್  ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ