ನವದೆಹಲಿ: ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ರೊಚ್ಚಿಗೆದ್ದಿರುವ ಇರಾನ್ ಈಗ ತೈಲ ಹಾದಿ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಬೆದರಿಕೆ ಹಾಕಿದೆ. ಇದರಿಂದ ಭಾರತ ಸೇರಿದಂತೆ ಜಾಗತಿಕವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಚಿತವಾಗಿದೆ.
ಇಸ್ರೇಲ್ ಗೆ ಬೆಂಬಲವಾಗಿ ನಿಂತಿರುವ ಅಮೆರಿಕಾ, ಇರಾನ್ ನ ಅಣುಸ್ಥಾವರಗಳ ಮೇಲೆ ಭಾರೀ ದಾಳಿ ಮಾಡಿದೆ. ಇದರಿಂದ ಇರಾನ್ ಗೆ ಸಾಕಷ್ಟು ಹಾನಿಯಾಗಿದೆ. ಹಾಗಿದ್ದರೂ ಇದನ್ನು ಇರಾನ್ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ಆದರೆ ತನ್ನ ಪ್ರಮುಖ ಸ್ಥಾವರಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಇರಾನ್ ಪ್ರತೀಕಾರಕ್ಕೆ ಮುಂದಾಗಿದೆ.
ಹೊರ್ಮುಜ್ ಜಲಸಂಧಿ ಮೂಲಕ ವಿಶ್ವದ ಶೇ.20 ರಷ್ಟು ಅನಿಲ ಸರಬರಾಜು ನಡೆಯುತ್ತದೆ. ಇದೀಗ ಪ್ರತೀಕಾರವಾಗಿ ಇರಾನ್ ಜಲಸಂಧುವನ್ನು ಬಂದ್ ಮಾಡಲು ಸಜ್ಜಾಗಿದೆ. ಈ ಮಾರ್ಗ ಬಂದ್ ಆದರೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಲಿದೆ. ಅದು ಭಾರತದ ಮೇಲೂ ತಟ್ಟಬಹುದು.
ಆದರೆ ಭಾರತದ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೊರ್ಮುಜ್ ಮಾರ್ಗ ಬಂದ್ ಆದರೂ ಭಾರತ ಬೇರೆ ಮಾರ್ಗಗಳ ಮೂಲಕ ತೈಲ ಆಮದು ಮಾಡಿಕೊಳ್ಳಲಿದೆ. ಇದರಿಂದ ದೇಶಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಹೊರ್ಮುಜ್ ಜಲಸಂಧಿ ಪರ್ಶಿಯನ್ ಕೊಲ್ಲಿಯಿಂದ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗಲ್ಫ್ ರಾಷ್ಟ್ರದಿಂದ ವಿವಿಧ ದೇಶಗಳಿಗೆ ಈ ಮಾರ್ಗದ ಮೂಲಕವೇ ತೈಲ ಸರಬರಾಜು ನಡೆಯುತ್ತದೆ.