ಐಪಿಎಲ್: ಕೇರಳದ ಹುಡುಗನ ಸಾಹಸಕ್ಕೆ ಬೆಚ್ಚಿಬಿದ್ದ ವಿರಾಟ್ ಕೊಹ್ಲಿ ಹುಡುಗರು

ಸೋಮವಾರ, 16 ಏಪ್ರಿಲ್ 2018 (08:36 IST)
ಬೆಂಗಳೂರು: ಮೊನ್ನೆಯ ಗೆಲುವಿನ ಸವಿಗನಸಲ್ಲಿ ಚಿನ್ನಸ್ವಾಮಿ ಅಂಗಣಕ್ಕೆ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಇಂದು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಕೇರಳದ ಹುಡುಗ ಸಂಜು ಸ್ಯಾಮ್ಸನ್ ಶಾಕ್ ಕೊಟ್ಟರು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಗೆ ಆರಂಭ ಸಾಧಾರಣವಾಗಿತ್ತು. ಆದರೆ ಆರಂಭಿಕ ಡಿ ಶಾರ್ಟ್ ಔಟಾಗುತ್ತಿದ್ದಂತೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದು ಬಂದ ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಮೈಮೇಲೆ ಭೂತ ಹೊಕ್ಕಿದವರಂತೆ ಬ್ಯಾಟ್ ಬೀಸಿದರು.

ಕೇವಲ 45 ಎಸೆತಗಳಲ್ಲಿ 10 ಸಿಕ್ಸರ್ ಗಳೊಂದಿಗೆ 92 ರನ್ ಸಿಡಿಸಿದರು. ಅವರ ಅಬ್ಬರದ ಬ್ಯಾಟಿಂಗ್ ಗೆ ಚಿನ್ನಸ್ವಾಮಿ ಅಂಗಣ ಕುಣಿದಾಡಿ ಬಿಟ್ಟಿತು. ಕೊನೆಯಲ್ಲಿ 217 ರನ್ ಪೇರಿಸಿದಾಗ ಚೇಸಿಂಗ್ ವೀರ ಕೊಹ್ಲಿ ಅದನ್ನು ಯಶಸ್ವಿಯಾಗಿ ಬೆನ್ನಟ್ಟುವರು ಎಂಬುದೇ ಆರ್ ಸಿಬಿ ಅಭಿಮಾನಿಗಳ ನಿರೀಕ್ಷೆಯಾಗಿತ್ತು.

ಆದರೆ ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 57 ರನ್ ಸಿಡಿಸಿ ಆಸೆ ಚಿಗುರಿಸಿ ಔಟಾದರು. ಮನ್ ದೀಪ್ ಸಿಂಗ್ 25 ಎಸೆತಗಳಲ್ಲಿ 47 ರನ್ ಗಳಿಸಿ ಭರವಸೆ ಹುಟ್ಟಿಸಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 19 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದಾಗ ಆರ್ ಸಿಬಿ ಗೆಲುವಿನ ಆಸೆ ಕಮರಿ ಹೋಯ್ತು. ಹಾಗಿದ್ದರೂ ದಿಟ್ಟ ಪ್ರತಿರೋಧವನ್ನೇ ತೋರಿದ ಆರ್ ಸಿಬಿ 6 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಇದರೊಂದಿಗೆ ಈ ಆವೃತ್ತಿಯ ಎರಡನೇ ಸೋಲುಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ