ಬೆಂಗಳೂರು: ಜೊತೆ ಜೊತೆಯಲಿ ಸೀರಿಯಲ್ ನಟ ಅನಿರುದ್ಧ್ಜಜತ್ಕರ್ ಅವರು ಬೆಂಗಳೂರಿನ ನಗರದಾದ್ಯಂತ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.
ಡಿಕೆ ಶಿವಕುಮಾರ್ ಅವರನ್ನು ಖುದ್ದು ಭೇಟಿಯಾಗಿ ನಟ ಅನಿರುದ್ಧ್ ಅವರು ಈ ಸಂಬಂಧ ಮನವಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮೂರು ಅಂಶಗಳನ್ನು ಉಲ್ಲೇಖಿಸಿದ್ದಾರೆ.
1. ಬೆಂಗಳೂರಿನ ನಗರದಾದ್ಯಂತ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ದಯಮಾಡಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ – ಬಹುತೇಕ ರಸ್ತೆಗಳ ಡಾಂಬರೀಕರಣ ಆಗಬೇಕು, ಬೀದಿ ದೀಪಗಳ ಸಮಸ್ಯೆ, ರಸ್ತೆಗಳ ತುಂಬಾ ಕಸದ ಸಮಸ್ಯೆ, ಫುಟ್ಪಾತ್ ಗಳ ಸಮಸ್ಯೆಗಳನ್ನು ಬಗೆಹರಿಸಬೇಕು.
2. ದುಸ್ಥಿತಿಯಲ್ಲಿರುವ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರ ಕೆರೆಯನ್ನು ಶುದ್ಧೀಕರಿಸುವ ಮೂಲಕ
ಜೀರ್ಣೋದ್ಧಾರ ಮಾಡಿ, ಕೆರೆಯನ್ನು ಪುನಶ್ಚೇತನಗೊಳಿಸಬೇಕಾಗಿ ವಿನಂತಿ.
3. ದುಸ್ಥಿತಿಯಲ್ಲಿರುವ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರ ಸಮೀಪದ ತರಳು ಗ್ರಾಮದ ಬಳಿಯಿರುವ ಗುಳಕಮಲೆ ಕೆರೆಯನ್ನು ಜರ್ಣೋದ್ಧಾರ ಮಾಡಬೇಕಾಗಿ ವಿನಂತಿ.
ಈ ಹಿಂದೆ ಕೂಡಾ ನಟ ಅನಿರುದ್ಧ ಸಾಮಾಜಿಕ ಕಳಕಳಿಯ ವಿಡಿಯೋವನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಅಧಿಕಾರಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿ, ಆ ಕುರಿತಾದ ವಿಡಿಯೊವನ್ನು ಅವರು ಹಂಚಿಕೊಂಡಿದ್ದರು. ಇದೀಗ ಬೆಂಗಳೂರಿನ ಪ್ರಮುಖ ಸಮಸ್ಯೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೇ ಅನಿರುದ್ಧ್ ಭೇಟಿಯಾಗಿದ್ದಾರೆ.