ಡಿಕೆ ಶಿವಕುಮಾರ್ ಹೇಳಿದ್ದು ಸರಿ ಎಂದ ಬೆನ್ನಲ್ಲೇ ಉಲ್ಟಾ ಹೊಡೆದ ನಟಿ ರಮ್ಯಾ

Krishnaveni K

ಮಂಗಳವಾರ, 4 ಮಾರ್ಚ್ 2025 (10:31 IST)
Photo Credit: X
ಬೆಂಗಳೂರು: ಚಿತ್ರರಂಗದವರ ನಟ್ಟು ಬೋಲ್ಟು ಸರಿ ಮಾಡ್ತೀನಿ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಸಮರ್ಥಿಸಿದ್ದ ನಟಿ ರಮ್ಯಾ ಈಗ ಉಲ್ಟಾ ಹೊಡೆದಿದ್ದಾರೆ.

ಬೆಂಗಳೂರು ಚಲನಚಿತ್ರೋತ್ಸವಕ್ಕೆ ಸ್ಟಾರ್ ನಟರು ಗೈರಾಗಿದ್ದರಿಂದ ಸಿಟ್ಟಿಗೆದ್ದಿದ್ದ ಡಿಕೆ ಶಿವಕುಮಾರ್ ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂದಿದ್ದರು. ಕನ್ನಡ ಪರ ಹೋರಾಟಗಳಲ್ಲಿ ಕನ್ನಡ ನಟರು ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಾಹೇಬ್ರು ಹೇಳಿದ್ದು ಸರಿ ಇದೆ. ಸ್ಟಾರ್ ನಟರು ಕನ್ನಡ ಪರ ಹೋರಾಟಗಳಲ್ಲಿ ಭಾಗಿಯಾಗಬೇಕು. ಇದಕ್ಕೆ ಡಾ. ರಾಜ್ ಕುಮಾರ್ ಅವರು ದೊಡ್ಡ ಉದಾಹರಣೆ ಎಂದೆಲ್ಲಾ ಹೇಳಿದ್ದರು. ರಮ್ಯಾ ಹೇಳಿಕೆಗೆ ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಮೊದಲು ನೀವು ಹೋರಾಟದಲ್ಲಿ ಭಾಗಿಯಾಗಿ ಎಂದು ಕಿಡಿ ಕಾರಿದ್ದರು.

ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಮತ್ತೊಂದು ಪೋಸ್ಟ್ ಮಾಡಿದ್ದು ಮೊದಲಿನ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ‘ಡಿಕೆ ಶಿವಕುಮಾರ್ ಅವರ ಹೇಳಿಕೆ ತಪ್ಪು ಎಂದು ಹೇಳಲಾಗದು. ಆದರೆ ಒಬ್ಬ ಕಲಾವಿದ ಒಂದು ಚಳುವಳಿಯಲ್ಲಿ ಭಾಗವಹಿಸಬೇಕೇ ಬೇಡವೇ ಎನ್ನುವುದು ಅವರ ವೈಯಕ್ತಿಕ ಇಚ್ಛೆ. ಯಾರನ್ನೂ ಈ ಸಂದರ್ಭದಲ್ಲಿ ಬೆದರಿಸಲು ಸಾಧ್ಯವಿಲ್ಲ. ಚಿತ್ರರಂಗದ ಅನೇಕ ಸ್ನೇಹಿತರು ಖಾಸಗಿಯಾಗಿ ಅನೇಕ ಅಭಿಪ್ರಾಯಗಳನ್ನು ಹೇಳುತ್ತಿರುತ್ತಾರೆ. ಆದರೆ ಟ್ರೋಲ್ ಆಗುವ ಭಯಕ್ಕೆ ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಯುತ್ತಾರೆ. ವಿಶೇಷವಾಗಿ ಮಹಿಳಾ ಕಲಾವಿದರು ನೇರ ಗುರಿಯಾಗುತ್ತಾರೆ. ಹೀಗಾಗಿ ನಮ್ಮ ನಾಯಕರು ಬೆದರಿಕೆ ಹಾಕುವುದು, ಬಲವಂತ ಮಾಡುವದನ್ನು ನಿಲ್ಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ