ವಿವಾದಾತ್ಮಕ ಹೇಳಿಕೆ: ತೆಲಂಗಾಣ ಸಚಿವೆಗೆ ಮಾತಿನಲ್ಲೇ ತಿವಿದ ನಟಿ ಸಮಂತಾ

Sampriya

ಗುರುವಾರ, 3 ಅಕ್ಟೋಬರ್ 2024 (14:02 IST)
Photo Courtesy X
ಹೈದರಾಬಾದ್: ತೆಲಂಗಾಣ ಅರಣ್ಯ ಮತ್ತು ಪರಿಸರ ಸಚಿವೆ ಕೊಂಡಾ ಸುರೇಖಾ ಅವರ ವಿವಾದಾತ್ಮಕ ಹೇಳಿಕೆಗೆ ನಟಿ ಸಮಂತಾ ಮಾತಿನಲ್ಲಿ ತಿವಿದಿದ್ದಾರೆ.

ವಿಚ್ಛೇದನ ಎನ್ನುವುದು ವೈಯಕ್ತಿಕ ವಿಚಾರ, ದಯವಿಟ್ಟು ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ. ನಾನು ಯಾವಾಗಲೂ  ರಾಜಕೀಯದಿಂದ ದೂರವಿದ್ದೇನೆ. ಹೀಗೆಯೇ ಮುಂದುವರಿಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ನಟ ನಾಗಚೈತನ್ಯ ಮತ್ತು ನಟಿ ಸಮಂತಾ ರುತ್‌ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್‌ (ಕೆಟಿಆರ್‌) ಕಾರಣ ಎಂಬ ತೆಲಂಗಾಣ ಅರಣ್ಯ ಮತ್ತು ಪರಿಸರ ಸಚಿವೆ ಕೊಂಡಾ ಸುರೇಖಾ ಹೇಳಿಕೆಗೆ ಪ್ರತಿಕ್ರಿಯಿಸಿದ ನಟಿ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ.

ನಮ್ಮ ವಿಚ್ಛೇದನವು ವೈಯಕ್ತಿಕ ವಿಷಯವಾಗಿದೆ. ಅದರ ಬಗ್ಗೆ ಇಂತಹ ಊಹಾಪೋಹದಿಂದ ದೂರವಿರುವಂತೆ ನಾನು ವಿನಂತಿಸುತ್ತೇನೆ. ನಮ್ಮ ನಿರ್ಧಾರ ಪರಸ್ಪರ ಒಪ್ಪಿಗೆಯಿಂದ ಮತ್ತು ಸೌಹಾರ್ದತೆಯಿಂದ ಕೂಡಿತ್ತು. ಯಾವುದೇ ರಾಜಕೀಯ ಪಿತೂರಿಗಳನ್ನು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುರೇಖಾ ಅವರೇ, ಮಹಿಳೆಯಾಗಿದ್ದುಕೊಂಡು, ಮಹಿಳೆಯರನ್ನು ಹೆಚ್ಚಾಗಿ ಪರಿಗಣಿಸದ ಈ ಸಿನಿ ಉದ್ಯಮದಲ್ಲಿ ಮನೆಯಿಂದ ಹೊರಬಂದು ಕೆಲಸ ಮಾಡಲು ಸಾಕಷ್ಟು ಧೈರ್ಯ ಮತ್ತು ಶಕ್ತಿ ಬೇಕು. ನನ್ನನ್ನು ರೂಪಿಸಿದ ಪಯಣದ ಬಗ್ಗೆ ನನಗೆ ಹೆಮ್ಮೆ ಇದೆ. ದಯವಿಟ್ಟು ಅದನ್ನು ಕ್ಷುಲ್ಲಕವಾಗಿ ನೋಡಬೇಡಿ. ಸಚಿವರಾಗಿ ನಿಮ್ಮ ಮಾತುಗಳಿಗೆ ಒಂದು ತೂಕವಿದೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ ಎಂದು ತೀಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ