ದರ್ಶನ್ ಫ್ಯಾನ್ಸ್ ಬಹಿಷ್ಕಾರದ ಅಭಿಯಾನಕ್ಕೆ ಕ್ಯಾರೇ ಎನ್ನದ ಜನ: ದುನಿಯಾ ವಿಜಯ್ ಮೊಗದಲ್ಲಿ ಖುಷಿ

Krishnaveni K

ಸೋಮವಾರ, 12 ಆಗಸ್ಟ್ 2024 (13:43 IST)
ಬೆಂಗಳೂರು: ನಟ ದರ್ಶನ್ ಅಭಿಮಾನಿಗಳು ತಮ್ಮ ಬಾಸ್ ಬಿಡುಗಡೆಯಾಗುವವರೆಗೂ ಯಾವುದೇ ಕನ್ನಡ ಸಿನಿಮಾಗಳನ್ನು ನೋಡಬೇಡಿ ಎಂದು ಬಹಿಷ್ಕಾರ ಅಭಿಯಾನ ಮಾಡಿದರೂ ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿದ್ದ ಭೀಮ ಸಿನಿಮಾ ಗೆದ್ದು ಬೀಗಿದೆ.

ನಟ ದರ್ಶನ್ ಅರೆಸ್ಟ್ ಆದ ಬಳಿಕ ಅವರ ಅಭಿಮಾನಿಗಳ ಆಕ್ರೋಶ ಮಿತಿ ಮೀರಿದೆ. ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಾಸ್ ಬಿಡುಗಡೆಯಾಗುವವರೆಗೂ ಕನ್ನಡದ ಯಾರ ಸಿನಿಮಾವನ್ನೂ ನೋಡಲು ಥಿಯೇಟರ್ ಗೆ ಹೋಗಬೇಡಿ ಎಂದು ಅಭಿಯಾನವನ್ನೇ ಮಾಡಿದ್ದರು.

ಅದರಲ್ಲೂ ವಿಶೇಷವಾಗಿ ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್ ಮತ್ತು ದುನಿಯಾ ವಿಜಯ್ ನಾಯಕರಾಗಿರುವ ಭೀಮ ಸಿನಿಮಾ ವಿರುದ್ಧವೂ ಅಭಿಯಾನ ಮಾಡಿದ್ದರು. ಧ್ರುವ ಮತ್ತು ದರ್ಶನ್ ಅಭಿಮಾನಿಗಳ ನಡುವೆಯಂತೂ ವಾರ್ ಆಗಿತ್ತು. ಆದರೆ ಅಭಿಮಾನಿಗಳ ಅಭಿಯಾನದ ನಡುವೆಯೂ ದುನಿಯಾ ವಿಜಯ್ ನಾಯಕರಾಗಿರುವ ಭೀಮ ಸಿನಿಮಾ ಗೆದ್ದಿದೆ.

ಭೀಮ ಸಿನಿಮಾ ವೀಕೆಂಡ್ ನಲ್ಲಿ ಉತ್ತಮ ಗಳಿಕೆ ಮಾಡಿದೆ. ಶುಕ್ರವಾರ ಬಿಡುಗಡೆಯಾಗಿದ್ದ ಭೀಮ ಸಿನಿಮಾ ಇದೀಗ ಬಿಡುಗಡೆಯಾದ ಮೂರೇ ದಿನಕ್ಕೆ 11 ಕೋಟಿ ರೂ. ಗಳಿಕೆ ಮಾಡಿದೆ. ಆ ಮೂಲಕ ವಿರೋಧದ ಅಭಿಯಾನದ ನಡುವೆ ಭೀಮ ಗೆದ್ದಿದ್ದಾನೆ. ಬಹಳ ದಿನಗಳ ನಂತರ ಬಿಡುಗಡೆಯಾದ ಸ್ಟಾರ್ ಸಿನಿಮಾವಿದು. ಹೀಗಾಗಿ ಜನ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಚಿತ್ರ ಗೆಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ