ಶಿಕ್ಷೆಯಾದರೂ ದರ್ಶನ್ ಒಪ್ಪಿಕೊಂಡಿರುವ ಚಿತ್ರಗಳ ಮುಗಿಸಲು ಇದೊಂದೇ ದಾರಿ

Krishnaveni K

ಶನಿವಾರ, 7 ಸೆಪ್ಟಂಬರ್ 2024 (08:47 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ವಿರುದ್ಧ ಈಗ ಬಲವಾದ ಸಾಕ್ಷ್ಯಗಳು ಸಿಕ್ಕಿದ್ದು ಚಾರ್ಜ್ ಶೀಟ್ ನಲ್ಲಿ ಎಲ್ಲವೂ ಉಲ್ಲೇಖವಾಗಿದೆ. ಆದರೆ ದರ್ಶನ್ ಗೆ ಶಿಕ್ಷೆಯಾದರೂ ಅವರು ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರೈಸಲು ದಾರಿಯಿದೆ.

ಈ ಹಿಂದೆ ಬಾಲಿವುಡ್ ನಟ ಸಂಜಯ್ ದತ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧಿತರಾದಾಗ ಅವರಿಗೂ ಇದೇ ಸಂಕಷ್ಟ ಎದುರಾಗಿತ್ತು. ಅವರು ಒಪ್ಪಿಕೊಂಡಿದ್ದ ಚಿತ್ರಗಳ ನಿರ್ಮಾಪಕರು ಕಂಗಾಲಾಗಿದ್ದರು. ಈ ಸಿನಿಮಾಗಳನ್ನು ಮುಗಿಸಲು ಸಂಜಯ್ ದತ್ ಗೆ ಪರೋಲ್ ನೀಡಲಾಗಿತ್ತು.

ಸಿನಿಮಾ ಚಿತ್ರೀಕರಣಕ್ಕಾಗಿ ಸಂಜಯ್ ದತ್ ಬರೋಬ್ಬರಿ 164 ದಿನ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ಈ ಪೆರೋಲ್ ಮೇಲೆ ಬಿಡುಗಡೆಯಾದಾಗಲೆಲ್ಲಾ ಚಿತ್ರೀಕರಣ ಮುಗಿಸಿ ನಿರ್ಮಾಪಕರ ಕಷ್ಟ ತಪ್ಪಿಸಿದ್ದರು. ಇದೀಗ ದರ್ಶನ್ ಗೂ ಅದೇ ಅವಕಾಶ ಸಿಗುವ ಸಾಧ್ಯತೆಯಿದೆ.

ದರ್ಶನ್ ಈಗಾಗಲೇ ಡೆವಿಲ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲವೇ ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿತ್ತು. ಇದಾದ ಬಳಿಕ ತರುಣ್ ಸುಧೀರ್, ಜೋಗಿ ಪ್ರೇಮ್ ಜೊತೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅತ್ತ ಜಾಮೀನು ಸಿಗದೇ ಶಿಕ್ಷೆ ಅನುಭವಿಸಬೇಕಾಗಿ ಬಂದರೆ ದರ್ಶನ್ ಪರವಾಗಿ ನಿರ್ಮಾಪಕರು ಪೆರೋಲ್ ಗೆ ಮನವಿ ಮಾಡಬಹುದು. ಪೆರೋಲ್ ಪಡೆದು ದರ್ಶನ್ ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ ಮುಗಿಸಿಕೊಡಬಹುದು. ಆದರೆ ಇದೆಲ್ಲದಕ್ಕೂ ನ್ಯಾಯಾಲಯ ಅವಕಾಶ ಮಾಡಿಕೊಡಬೇಕಷ್ಟೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ