ಪವಿತ್ರಾ ಗೌಡ ವಿರುದ್ಧ ಕಾನೂನು ಸಮರದ ಎಚ್ಚರಿಕೆ ನೀಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

Krishnaveni K

ಗುರುವಾರ, 25 ಜನವರಿ 2024 (10:00 IST)
ಬೆಂಗಳೂರು: ಪವಿತ್ರಾ ಗೌಡ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತೆ ಅಸಮಾಧಾನಗೊಂಡಿದ್ದು, ಕಾನೂನು ಸಮರದ ಎಚ್ಚರಿಕೆ ನೀಡಿದ್ದಾರೆ.

ವಿಜಯಲಕ್ಷ್ಮಿ ತಮ್ಮ ಪತಿ ದರ್ಶನ್ ಮತ್ತು ಮಗ ವಿನೀಶ್ ಜೊತೆಗಿನ ಫೋಟೋ ಹಂಚಿಕೊಂಡು ಕುಟುಂಬವೇ ಎಲ್ಲಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಪವಿತ್ರಾ ಗೌಡ ಕೂಡಾ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ನಮ್ಮ ಸಂಬಂಧಕ್ಕೆ 10 ವರ್ಷವಾಗಿದೆ. ಇನ್ನೂ ಹಲವು ವರ್ಷ ಜೊತೆಗಿರಬೇಕು ಎಂದು ಬರೆದುಕೊಂಡಿದ್ದರು.

ಇದು ವಿಜಯಲಕ್ಷ್ಮಿ ಸಿಂಗ್ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಲ್ಲದೆ, ಕಾನೂನು ಸಮರದ ಎಚ್ಚರಿಕೆಯನ್ನೂ ನೀಡಿದ್ದಾರೆ. ಪವಿತ್ರಾ ಮತ್ತು ಆಕೆಯ ಪತಿ ಸಂಜಯ್ ಸಿಂಗ್ ಜೊತೆಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು ವಿಜಯಲಕ್ಷ್ಮಿ ಸಿಂಗ್ ಖಡಕ್ ಸಂದೇಶ ಬರೆದಿದ್ದಾರೆ.

ವಿಜಯಲಕ್ಷ್ಮೀ ಹೇಳಿದ್ದೇನು?
ಇನ್ನೊಬ್ಬರ ಗಂಡನ ಜೊತೆಗೆ ಈ ರೀತಿ ಫೋಟೋ ಹಂಚಿಕೊಳ್ಳಬಾರದು ಎಂದು ಈ ಮಹಿಳೆಗೆ ಕೊಂಚವಾದರೂ ಬುದ್ಧಿ ಇರಬೇಕು. ಇದು ಆಕೆಯ ಮನಸ್ಥಿತಿ, ಮೌಲ್ಯ ಏನೆಂದು ತೋರಿಸುತ್ತದೆ. ತನ್ನ ವೈಯಕ್ತಿಕ ಲಾಭಕ್ಕೆ ವಿವಾಹಿತ ವ್ಯಕ್ತಿಯೊಬ್ಬನ ಜೊತೆಗೆ ಫೋಟೋ ಹಂಚಿಕೊಳ್ಳುವ ಆಕೆಯ ಉದ್ದೇಶ ಏನೆಂದು ವಿವರಿಸುತ್ತದೆ. ಈ ಫೋಟೋ ನೋಡಿದರೆ ಖುಷಿ ಗೌಡ ಪವಿತ್ರ ಮತ್ತು ಸಂಜಯ್ ಮಗಳು ಎಂಬುದು ಸ್ಪಷ್ಟವಾಗುತ್ತದೆ.  ನಾನು ಸಾಮಾನ್ಯವಾಗಿ ವೈಯಕ್ತಿಕ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಕೆಲವೊಮ್ಮೆ ನನ್ನ ಕುಟುಂಬದ ಹಿತಕ್ಕಾಗಿ ಧ್ವನಿ ಎತ್ತುವುದು ಅನಿವಾರ್ಯವೆನಿಸುತ್ತದೆ. ಸಮಾಜಕ್ಕೆ ಈ ರೀತಿ ತಪ್ಪು ಸಂದೇಶ ಕೊಡುವವರ ವಿರುದ್ಧ ತಕ್ಕ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.

ಹೀಗೊಂದು ಖಡಕ್ ಸಂದೇಶ ಬರೆದ ವಿಜಯಲಕ್ಷ್ಮಿ ಸಿಂಗ್ ಸಂಜಯ್ ಸಿಂಗ್, ಪವಿತ್ರಾ ಗೌಡ, ಖುಷಿ ಗೌಡ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ. ಈ ಮೊದಲು ದರ್ಶನ್ ಹುಟ್ಟುಹಬ್ಬಕ್ಕೆ ಪವಿತ್ರಾ ಗೌಡ ಪಾರ್ಟಿ ನೀಡಿದಾಗ ಮೇಘಾ ಶೆಟ್ಟಿ ಪಾಲ್ಗೊಂಡು ಆ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಆಗಲೂ ವಿಜಯಲಕ್ಷ್ಮಿ ಇನ್ ಸ್ಟಾಗ್ರಾಂ ಮೂಲಕ ಮೇಘಾ ಶೆಟ್ಟಿ ಮತ್ತು ಪವಿತ್ರಾ ಗೌಡಗೆ ಎಚ್ಚರಿಕೆ ನೀಡಿದ್ದರು. ಬಳಿಕ ಮೇಘಾ ಆ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು. ಕೆಲವು ದಿನಗಳ ಮೊದಲು ಪವಿತ್ರಾ ಗೌಡ ಪುತ್ರಿ ಖುಷಿ ಬರ್ತ್ ಡೇಯಲ್ಲಿ ದರ್ಶನ್ ಖುಷಿಯಿಂದ ಕುಣಿಯುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದರ್ಶನ್ ಮತ್ತು ಪವಿತ್ರಾ ನಡುವೆ ಆತ್ಮೀಯ ಸಂಬಂಧವಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ