ಬೆಂಗಳೂರು: ಪೊಲೀಸರು ಬೆಂಡೆತ್ತುತ್ತಿದ್ದಂತೇ ನಟ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ರಮ್ಯಾಗೆ ಅಶ್ಲೀಲ ಕಾಮೆಂಟ್ ಮಾಡುತ್ತಿದ್ದವರು ಈಗ ಸೈಲೆಂಟ್ ಆಗಿದ್ದಾರೆ. ಇಂದು ರಮ್ಯಾ ಮಾಡಿರುವ ಒಂದು ಪೋಸ್ಟ್ ಗೆ ಯಾರಿಂದಲೂ ಅಶ್ಲೀಲ ಕಾಮೆಂಟ್ ಬಂದಿಲ್ಲ ಎನ್ನುವುದೇ ಇದಕ್ಕೆ ಸಾಕ್ಷಿ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಒಂದು ಪೋಸ್ಟ್ ದರ್ಶನ್ ಅಭಿಮಾನಿಗಳು ಕೆರಳುವಂತೆ ಮಾಡಿತ್ತು. ಹೀಗಾಗಿ ಇನ್ ಸ್ಟಾಗ್ರಾಂನಲ್ಲಿ ನಾನಾ ಖಾತೆಗಳಿಂದ ಅಶ್ಲೀಲ ಪದ ಬಳಸಿ ನಿಂದಿಸುತ್ತಿದ್ದರು. ಇದರ ಬಗ್ಗೆ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು.
ರಮ್ಯಾಗೆ ಮಹಿಳಾ ಆಯೋಗವೂ ಬೆಂಬಲ ಘೋಷಿಸಿತ್ತು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ರಮ್ಯಾ ಪಟ್ಟಿ ನೀಡಿರುವ 43 ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಇದರ ಬೆನ್ನಲ್ಲೇ ಈಗ ಅಶ್ಲೀಲ ಕಾಮೆಂಟ್ ಮಾಡುತ್ತಿದ್ದವರು ತಕ್ಕ ಮಟ್ಟಿಗೆ ಸೈಲೆಂಟ್ ಆಗಿದ್ದಾರೆ.
ಇಂದು ರಮ್ಯಾ ತಮಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಪೋಸ್ಟ್ ಹಾಕಿದ್ದರು. ಸಾಮಾನ್ಯವಾಗಿ ಇಂತಹ ಪೋಸ್ಟ್ ಹಾಕಿದಾಗ ಡಿಬಾಸ್ ಹೆಸರಿನಲ್ಲಿ ಅನೇಕರು ಬಂದು ಕಾಮೆಂಟ್ ಮಾಡುತ್ತಾರೆ. ಆದರೆ ಇಂದು ಮಾತ್ರ ಯಾರೂ ಕಾಮೆಂಟ್ ಮಾಡಿಲ್ಲ. ಹೀಗಾಗಿ ಪೊಲೀಸ್ ವಿಚಾರಣೆಯಿಂದ ಅಭಿಮಾನಿ ಎಂಬ ಹೆಸರಿನಲ್ಲಿ ಅಶ್ಲೀಲ ಕಾಮೆಂಟ್ ಮಾಡುವವರು ಕೊಂಚ ತಣ್ಣಗಾಗಿದ್ದಾರೆ ಎಂದೇ ಹೇಳಬಹುದು.