ಕನ್ನಡಪರ ಹೋರಾಟದ ಕಿಚ್ಚು ಹಚ್ಚಲಿದೆಯಾ `ಗೀತಾ’?

ಮಂಗಳವಾರ, 24 ಸೆಪ್ಟಂಬರ್ 2019 (14:01 IST)
ಆಯಾ ಕಾಲಘಟ್ಟದಲ್ಲಿ ಸಮಾಜದ ಪಲ್ಲಟಗಳಿಗೆ ಕಣ್ಣಾಗುವಂಥಾ ಕಥೆಗಳು ಸಿನಿಮಾವಾಗಿ ಸಾಮಾಜಿಕ ಕ್ರಾಂತಿಗೆ ಕಾರಣವಾದ ಇತಿಹಾಸ ಕನ್ನಡ ಚಿತ್ರರಂಗಕ್ಕಿದೆ. ಹಲವಾರು ವಿಚಾರಗಳ ಬಗ್ಗೆ ಜನ ಜಾಗೃತಿ ಮೂಡಿಸೋದರಿಂದ ಹಿಡಿದು ಕನ್ನಡಾಭಿಮಾನವನ್ನು ಗಟ್ಟಿಗೊಳಿಸುವವರೆಗೆ ಸಿನಿಮಾಗಳ ಪಾಲು ದೊಡ್ಡದಿದೆ. ಇದೀಗ ತೆರೆಗಾಣಲು ಸಜ್ಜಾಗಿರುವ ಗಣೇಶ್ ಅಭಿನಯದ ಗೀತಾ ಚಿತ್ರದಿಂದಲೇ ಕರ್ನಾಟಕದಲ್ಲಿ ಮತ್ತೊಮ್ಮೆ ಕನ್ನಡಪರ ಹೋರಾಟದ ಕಾವೇರಿಕೊಳ್ಳಲಿದೆಯಾ ಅಂತೊಂದು ಪ್ರಶ್ನೆ ಎಲ್ಲರಲ್ಲಿಯೂ ಇದೆ.
ಹೇಳಿಕೇಳಿ ಈಗ ಕರ್ನಾಟಕದಲ್ಲಿ ಕನ್ನಡಿಗರು ಮತ್ತು ಕನ್ನಡದ ಅಳಿವು ಉಳಿವಿನ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿವೆ. ಹಿಂದಿ ದವಸ್ನಂಥಾ ಕ್ರಮಗಳು ಅದನ್ನು ಮತ್ತಷ್ಟು ತೀವ್ರವಾಗಿಸಿವೆ. ಕರ್ನಾಟಕದ ಗಡಿನಾಡಿನಲ್ಲಿಯೇ ಕನ್ನಡಿಗರು ಪರಕೀಯರಂತಾಗಿರೋ ದುರಂತದ ಬಗ್ಗೆಯೂ ನಿಕಷಗಳು ನಡೆಯುತ್ತಿವೆ. ಇಂಥಾ ಘಳಿಗೆಯಲ್ಲಿ ಬಿಡುಗಡೆಯಾಗಿರೋ ಗೀತಾ ಟೀಸರ್ ಕನ್ನಡಪರ ಹೋರಾಟದ ಮಜಲುಗಳ ಮೂಲಕ ತುಂಬಾನೇ ಪ್ರಸಿದ್ಧಿ ಪಡೆದುಕೊಂಡಿದೆ. ಈ ಟ್ರೇಲರ್ನಲ್ಲಿ ಕನ್ನಡಾಭಿಮಾನ ಮೇಳೈಸಿದೆ. ಗಣೇಶ್ ಕನ್ನಡಪರ ಹೋರಾಟಗಾರನಾಗಿ ಅಬ್ಬರಿಸಿದ ರೀತಿಗೂ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಈ ಚಿತ್ರವನ್ನು ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ.
 
ಒಟ್ಟಾರೆಯಾಗಿ ಗೀತಾ ಚಿತ್ರದ ನಿಜವಾದ ಜೀವಾಳವೇ ಕನ್ನಡಾಭಿಮಾನ. ಇಲ್ಲಿ ಅಪ್ಪಟ ಕನ್ನಡಾಭಿಮಾನಿಯ ಪಾತ್ರದಲ್ಲಿ ಗಣೇಶ್ ನಡೆಸಿದ್ದಾರೆ. ಟ್ರೇಲರ್ನಲ್ಲಿಯೇ ಗಣೇಶ್ರ ಕನ್ನಡಾಭಿಮಾನದ ಡೈಲಾಗುಗಳು ಮನಸೆಳೆದಿದ್ದವು. ಸಿನಿಮಾದುದ್ದಕ್ಕು ಅದು ಮತ್ತಷ್ಟು ತೀವ್ರವಾಗಿವೆಯಂತೆ. ಈ ಮೂಲಕವೇ ಈ ಸಿನಿಮಾ ಕನ್ನಡಕ್ಕೆ ಕಂಟಕ ಎದುರಾದರೆ ಸಿಡಿದೇಳುವ ಕೆಚ್ಚನ್ನು ಕನ್ನಡಿಗರೆದೆಗೆ ತುಂಬಿಸುವಂತೆ ಮೂಡಿ ಬಂದಿದೆಯಂತೆ. ಈ ಸಿನಿಮಾ ತೆರೆಗಂಡ ನಂತರದಲ್ಲಿ ಈಗ ಸಣ್ಣಗೆ ಹಬೆಯಾಡುತ್ತಿರೋ ಕನ್ನಡಪರ ಹೋರಾಟ ಧಗಧಗಿಸೋ ಸೂಚನೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ