ದರ್ಶನ್ ಟ್ವೀಟ್ ನಲ್ಲಿ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವೀಟ್!

ಮಂಗಳವಾರ, 17 ಸೆಪ್ಟಂಬರ್ 2019 (17:14 IST)
ಬೆಂಗಳೂರು: ಪೈಲ್ವಾನ್ ಪೈರಸಿಗೆ ದರ್ಶನ್ ಅಭಿಮಾನಿಗಳು ಕಾರಣ ಎಂಬ ಕೆಲವು ಕಿಡಿಗೇಡಿಗಳ ಆರೋಪದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಇಬ್ಬರು ಖ್ಯಾತ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವಿನ ಶೀತಲ ಸಮರಕ್ಕೆ ಮತ್ತೆ ಶುರುವಾಗಿದೆ.


ತಮ್ಮ ಅಭಿಮಾನಿಗಳ ಮೇಲೆ ಗೂಬೆ ಕೂರಿಸಿದ್ದಕ್ಕೆ ಸಿಟ್ಟಾದ ದರ್ಶನ್ ಟ್ವೀಟ್ ಮಾಡಿ ‘ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿ ಮಾತು- ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ’ ಎಂದು ಕಿಚ್ಚ ಸುದೀಪ್ ಮತ್ತು ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟಿದ್ದರು.

ಇದಾದ ಒಂದೇ ಗಂಟೆಯೊಳಗೆ ಕಿಚ್ಚ ಸುದೀಪ್ ಕೂಡಾ ಸುದೀರ್ಘ ಪತ್ರ ಮುಖೇನ ಟ್ವೀಟ್ ಮಾಡಿದ್ದು, ‘ಇದರ ಜತೆಗೆ ನಾನು ಯಾರಿಗೂ ಎಚ್ಚರಿಕೆ ಕೊಟ್ಟಿಲ್ಲ ಮತ್ತು ಕೊಡೋದೂ ಇಲ್ಲ. ಒಂದು ವೇಳೆ ಮಾತಿನಿಂದಲೇ ಯುದ್ಧ ಗೆಲ್ಲಬಹುದಾಗಿದ್ದರೆ ಜಗತ್ತಿನಲ್ಲಿ ಇಂದು ಹಲವು ಜನ ಆಳುವವರಿರುತ್ತಿದ್ದರು. ನಾನು ಮಾನವೀಯತೆಯ ದಾರಿಯಲ್ಲಿ ಹೋಗಲು ಬಯಸುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಆ ಮೂಲಕ ಎಚ್ಚರಿಕೆ ಎಂದ ದರ್ಶನ್ ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಒಂದು ಚಿತ್ರದ ಹೆಸರಿನಲ್ಲಿ ಚಿತ್ರರಂಗದ ಇಬ್ಬರು ಪ್ರತಿಭಾವಂತ ಸ್ಟಾರ್ ಗಳ ಮಧ್ಯೆ ಮತ್ತೆ ಕಲಹ ಶುರುವಾಗಿರುವುದು ದುರಂತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ