ಹಂಸಲೇಖ ಇದ್ರೆ ಶೋ ನೋಡಲ್ಲ: ಸರಿಗಮಪ ಶೋಗೆ ಬಾಯ್ಕಾಟ್ ಬಿಸಿ

Krishnaveni K

ಬುಧವಾರ, 4 ಸೆಪ್ಟಂಬರ್ 2024 (09:40 IST)
ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇದ್ದರೆ ನಾವು ಸರಿಗಮಪ ರಿಯಾಲಿಟಿ ಶೋವನ್ನೇ ನೋಡಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಒಂದು ಶುರುವಾಗಿದೆ. ಇದಕ್ಕೆ ಕಾರಣ ಹಂಸಲೇಖರ ಇತ್ತೀಚೆಗಿನ ಕೆಲವು ಹೇಳಿಕೆಗಳು.

ಸಂಗೀತ ನಿರ್ದೇಶಕ ಹಂಸಲೇಖ ಇತ್ತೀಚೆಗೆ ಮೋದಿಯನ್ನು ಟೀಕಿಸುವ ಭರದಲ್ಲಿ ಮಲಯಾಳಿಗಳು ಬುದ್ಧಿವಂತರು, ಕನ್ನಡಿಗರು ಬುದ್ಧಿ ಬಳಸಲ್ಲ, ಭಾವನಾತ್ಮಕವಾಗಿ ಯೋಚಿಸುತ್ತಾರೆ ಎಂದಿದ್ದರು. ಅದಕ್ಕೆ ಮೊದಲು ಜೈನ ಮುನಿಗಳ, ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.
  
ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಹಂಸಲೇಖ ಬಗ್ಗೆ ಒಂದು ವರ್ಗದ ಜನರಲ್ಲಿ ಭಾರೀ ಆಕ್ರೋಶವಿದೆ. ಈ ಕಾರಣಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸರಿಗಮಪ ಹಾಡಿನ ರಿಯಾಲಿಟಿ ಶೋ ತೀರ್ಪುಗಾರರಾಗಿ ಈ ಬಾರಿಯೂ ಹಂಸಲೇಖ ಇದ್ದರೆ ನಾವು ಶೋವನ್ನೇ ಬಹಿಷ್ಕರಿಸುವುದಾಗಿ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.

ಜೀ ಕನ್ನಡ ಇತ್ತೀಚೆಗಷ್ಟೇ ಹೊಸ ಕಂತಿನ ಆರಂಭದ ಬಗ್ಗೆ ಪ್ರೋಮೋ ಹರಿಯಬಿಟ್ಟಿತ್ತು. ಇದರ ಬೆನ್ನಲ್ಲೇ ಕೆಲವರು ಹಂಸಲೇಖರಂತಹ ವಿಕ್ಷಿಪ್ತ ಮನಸ್ಥಿತಿಯ ವ್ಯಕ್ತಿ ಜಡ್ಜ್ ಆಗಿರುವ ಶೋವನ್ನು ನಾವು ನೋಡಲ್ಲ ಎಂದು ಹಠ ಹಿಡಿದಿದ್ದಾರೆ. ಈ ಟ್ರೆಂಡ್ ಎಲ್ಲಿಗೆ ಮುಟ್ಟುತ್ತೋ ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ