ನರೇಶ್ ಪತ್ನಿ ವಿರುದ್ಧ ಪವಿತ್ರಾ ಲೋಕೇಶ್ ಕೆಂಡಾಮಂಡಲ

ಶುಕ್ರವಾರ, 1 ಜುಲೈ 2022 (16:50 IST)
ಬೆಂಗಳೂರು: ಪವಿತ್ರಾ ಲೋಕೇಶ್ ಮತ್ತು ನರೇಶ್ ನಡುವೆ ಮದುವೆ ಗಲಾಟೆ ಈಗ ಮತ್ತೊಂದು ಹಂತ ತಲುಪಿದೆ. ಇದೀಗ ನಟಿ ಪವಿತ್ರಾ ಲೋಕೇಶ್ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ನರೇಶ್ ಮೂರನೇ ಪತ್ನಿ ರಮ್ಯಾ ವಿರುದ್ಧ ಕಿಡಿ ಕಾರಿದ್ದಾರೆ.

ರಮ್ಯಾ ಈ ಮೊದಲು ಸಂದರ್ಶನದಲ್ಲಿ ಪವಿತ್ರಾಗೆ ನರೇಶ್ ತಮ್ಮ ತಾಯಿಯ ಚಿನ್ನಾಭರಣ ಕೊಡಿಸಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪವಿತ್ರಾ ಲೋಕೇಶ್, ‘ನಾನು ನರೇಶ್ ರಷ್ಟು ಶ್ರೀಮಂತೆ ಅಲ್ಲದಿರಬಹುದು. ಆದರೆ ನನಗೆ ಬೇಕಾದ್ದನ್ನು ಕೊಳ್ಳುವ ಶಕ್ತಿ ಭಗವಂತ ಕೊಟ್ಟಿದ್ದಾನೆ. ನಾನು ಯಾಕೆ ಬೇರೆಯವರ ಆಭರಣ ಹಾಕಿಕೊಳ್ಳಲಿ? ಈಗ ನನ್ನ ಬಳಿಯಿರುವಂತದ್ದೇ ಆಭರಣ ಅವರ ಬಳಿ ಇರಬಹುದು. ಹಾಗಂತ ನಾನು ಅವರದ್ದನ್ನು ಹಾಕಿಕೊಂಡಿದ್ದೇನೆ ಎಂದು ಹೇಳಲು ಸಾಧ್ಯವಾ? ನರೇಶ್-ರಮ್ಯಾ ನಡುವೆ ದಾಂಪತ್ಯ ಜೀವನದಲ್ಲಿ ಸಮಸ್ಯೆಯಿದ್ದರೆ ನನ್ನ ಹೆಸರನ್ನು ಯಾಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ನೀವು ಅವರನ್ನೇ ಕೇಳಬೇಕು?’ ಎಂದು ಪವಿತ್ರಾ ತಿರುಗೇಟು ಕೊಟ್ಟಿದ್ದಾರೆ.

ಇನ್ನು ರಮ್ಯಾ ಈ ಹಿಂದೆ ಪವಿತ್ರಾ ಲೋಕೇಶ್ ಮನೆಗೆ ಬಂದಾಗ ಬೆಳ್ಳಿ ತಟ್ಟೆ-ಲೋಟೆಯಲ್ಲಿ ಊಟ ಹಾಕಿ ಉಪಚರಿಸಿದ್ದೆ ಎಂದಿದ್ದರು. ಇದನ್ನು ನಿರಾಕರಿಸಿರುವ ಪವಿತ್ರಾ ಲೋಕೇಶ್ ಅಂತಹದ್ದೇನೂ ನಡೆದೇ ಇಲ್ಲ. ನಾನು ನರೇಶ್ ಪತ್ನಿಯನ್ನು ನೇರವಾಗಿ ಭೇಟಿಯೇ ಆಗಿಲ್ಲ. ನಾನು ನರೇಶ್ ಕಳೆದ ಕೆಲವು ವರ್ಷಗಳಿಂದ ಉತ್ತಮ ಸ್ನೇಹಿತರಷ್ಟೇ ಎಂದಿದ್ದಾರೆ.

ಇನ್ನು, ಸುಚೇಂದ್ರ ಪ್ರಸಾದ್ ಜೊತೆಗಿನ ದಾಂಪತ್ಯ ಜೀವನ ಮುರಿದು ಬೀಳಲು ನರೇಶ್ ಜೊತೆಗಿನ ಸ್ನೇಹವೇ ಕಾರಣ ಎಂಬ ಆರೋಪಗಳಿಗೂ ಉತ್ತರ ಕೊಟ್ಟಿರುವ ಪವಿತ್ರಾ, ನಾನು ಸುಚೇಂದ್ರ ಪ್ರಸಾದ್ 2017 ರಲ್ಲೇ ಪ್ರತ್ಯೇಕವಾಗಿದ್ದೇವೆ. ನಾನು ಪ್ರತ್ಯೇಕ ಫ್ಲ್ಯಾಟ್ ನಲ್ಲಿ ವಾಸ ಮಾಡುತ್ತಿದ್ದೇನೆ. ನಾನು ಅವರಿಂದ ಬೇರೆಯಾಗಿರುವುದರ ಕಾರಣ ಅದು ನನ್ನ ವೈಯಕ್ತಿಕ. ಅದನ್ನು ನಾನು ಬಹಿರಂಗಪಡಿಸಬೇಕಾಗಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ