ಬೆಂಗಳೂರು: ಧನ್ವೀರ್ ಗೌಡ ನಾಯಕರಾಗಿರುವ ವಾಮನ ಸಿನಿಮಾ ವೀಕ್ಷಿಸಲು ಮೊನ್ನೆಯಷ್ಟೇ ನಟ ದರ್ಶನ್ ಥಿಯೇಟರ್ ಗೆ ಬಂದಿದ್ದರು. ದರ್ಶನ್ ಗೆ ಬಿಗಿ ಭದ್ರತೆ ಒದಗಿಸಲು ಚಿತ್ರತಂಡ 3 ಲಕ್ಷ ರೂ. ಖರ್ಚು ಮಾಡಿದೆ ಎನ್ನಲಾಗುತ್ತಿದೆ.
ನಟ ದರ್ಶನ್ ಬರುತ್ತಿದ್ದಾರೆಂದಾಗ ಆ ಸ್ಥಳದಲ್ಲಿ ಸಾಕಷ್ಟು ಅಭಿಮಾನಿಗಳು ಜಮಾಯಿಸುತ್ತಾರೆ. ಈ ಮೊದಲು ಪುಷ್ಪ 2 ಸಿನಿಮಾ ವೀಕ್ಷಿಸಲು ಅಲ್ಲು ಅರ್ಜುನ್ ಥಿಯೇಟರ್ ಗೆ ಬಂದಾಗ ಸಾಕಷ್ಟು ಭದ್ರತೆಯಿಲ್ಲದ ಕಾರಣಕ್ಕೆ ನೂಕುನುಗ್ಗಲಿನಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು.
ಇದೀಗ ದರ್ಶನ್ ವಿಚಾರದಲ್ಲೂ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ನಟ ದರ್ಶನ್ ಜೈಲಿಗೆ ಹೋಗಿ ಬಂದ ಮೇಲೆ ಇದೇ ಮೊದಲ ಬಾರಿಗೆ ಥಿಯೇಟರ್ ಗೆ ಸಿನಿಮಾ ವೀಕ್ಷಣೆಗೆ ಬಂದಿದ್ದರು. ಹೀಗಾಗಿ ಸಾಕಷ್ಟು ಜನ ಅವರನ್ನು ನೋಡಲು ಬಂದಿದ್ದರು.
ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಗೆ ಭದ್ರತೆ ಒದಗಿಸಲು ಕೇಳಲಾಗಿತ್ತು. ಇದಕ್ಕೆ ಪೊಲೀಸರು 3 ಲಕ್ಷ ರೂ. ಶುಲ್ಕ ಕಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. 3 ಲಕ್ಷ ರೂ. ಹಣವನ್ನು ಬಂದೋಬಸ್ತ್ ಟೀಂಗೆ ಕೊಟ್ಟಮೇಲಷ್ಟೇ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ.