ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ಬಿಗ್ಬಾಸ್ ಸ್ಪರ್ಧಿ ರಜತ್, ವಿನಯ್ ಗೌಡಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ₹10ಸಾವಿರ ಶ್ಯೂರಿಟಿ ಒದಗಿಸುವಂತೆ ನ್ಯಾಯಾಲಯ ಸೂಚಿಸಿ ಜಾಮೀನು ಮಂಜೂರು ಮಡಿದೆ.
ಮಾರ್ಚ್ 26 ರಂದು ಈ ಇಬ್ಬರು ಆರೋಪಿಗಳನ್ನು ಕೋರ್ಟ್ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು. ಅಲ್ಲದೆ ಕಸ್ಟಡಿ ಅವಧಿ ಮುಗಿದ ಬಳಿಕ ಅಂದರೆ, ಮಾರ್ಚ್ 28ರಂದು ಸಂಜೆ 4 ಗಂಟೆಗೆ ಇಬ್ಬರನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಸೂಚಿಸಿತ್ತು. ಅದರಂತೆ ಪೊಲೀಸರು ಇಂದು ಆರೋಪಿಗಳನ್ನು ಕೋರ್ಟ್ ಹಾಜರುಪಡಿಸಿದ್ದರು.
ಕಳೆದ ಮಾರ್ಚ್ 20ರಂದು ನಾಗರಬಾವಿಯ ಅಕ್ಷಯ ಸ್ಟುಡಿಯೋ ಬಳಿ ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್ಗಳ ರೀಲ್ಸ್ ವಿಡಿಯೋ ಮಾಡಿ, ಚರ್ಚೆಗೆ ಕಾರಣವಾಗಿದ್ದರು. ಇದನ್ನು ಬುಜ್ಜಿ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆಗೆ ರಜತ್ ಅಪ್ಲೋಡ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸವೇಶ್ವನಗರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೋಮವಾರ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದರು.
ತಾವು ಮಾಡಿದ ವಿಡಿಯೋದಲ್ಲಿ ನಕಲಿ ಮಚ್ಚು ಉಪಯೋಗಿಸಲಾಗಿದೆ ಎಂದು ಹೇಳಿ ಫೈಬರ್ ನಿಂದ ತಯಾರಿಸಿದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ನೀಡಿದ್ದರು.
ಆದರೆ ತನಿಖೆ ವೇಳೆ ವಿಡಿಯೋದಲ್ಲಿ ಬಳಕೆಯಾಗಿರುವ ಮಚ್ಚಿಗೂ ಆರೋಪಿಗಳು ನೀಡಿದ್ದ ಮಚ್ಚಿಗೂ ತಾಳೆಯಾಗದ ಹಿನ್ನೆಲೆ ಪೊಲೀಸರು, ಆರೋಪಿಗಳನ್ನು ಮಂಗಳವಾರ ಮತ್ತೆ ವಶಕ್ಕೆ ಪಡೆದು ರೀಲ್ಸ್ನಲ್ಲಿ ಬಳಕೆಯಾಗಿರುವ ಮಚ್ಚು ತೋರಿಸುವಂತೆ ಸ್ಥಳ ಮಹಜರು ಮಾಡಿದ್ದರು. ಅಲ್ಲದೆ ಬುಧವಾರ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು.