ಪುನೀತ್​ಗೆ ಸಂಗೀತದ ನುಡಿನಮನ ಸಲ್ಲಿಸಿದ ರಾಜೇಶ್ ಕೃಷ್ಣನ್

ಮಂಗಳವಾರ, 9 ನವೆಂಬರ್ 2021 (15:31 IST)
ದಾವಣಗೆರೆ : ಪುನೀತ್ ರಾಜ್​ಕುಮಾರ್​ಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೊನ್ನಾಳಿ ಪಟ್ಟಣದಲ್ಲಿ ನಿನ್ನೆ (ನವೆಂಬರ್ 8) ತಡರಾತ್ರಿ ವರೆಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಮ್ಮ ಮಧುರ ಸಂಗೀತದ ಮೂಲಕ ಗಾಯಕ ರಾಜೇಶ್ ಕೃಷ್ಣನ್, ಅಪ್ಪುಗೆ ನುಡಿನಮನ ಸಲ್ಲಿಸಿದರು. ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಕುಟುಂಬದ 62 ಜನರು ನೇತ್ರದಾನಕ್ಕೆ ನಿರ್ಧಾರ ಮಾಡಿದರು. ಜತೆಗೆ ಶಾಸಕರಿಗೆ ಅವಳಿ ತಾಲೂಕಿನ 500 ಜನರು ಸಾಥ್ ನೀಡಿದ್ದು, ನೇತ್ರದಾನಕ್ಕೆ ಕೈಜೋಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಅವಳಿ ತಾಲೂಕಿನಲ್ಲಿ ಐದು ಸಾವಿರ ಜನರು ನೇತ್ರಾದಾನ ಮಾಡಿಸಲು ಸಚಿವ ರೇಣುಕಾಚಾರ್ಯರು ಸಂಕಲ್ಪ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ನೇತ್ರದಾನದಿಂದ ಪ್ರೇರಣೆಗೊಂಡ ರೇಣುಕಾಚಾರ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಹೊನ್ನಾಳಿಯಲ್ಲಿ ನಟ ಪುನೀತ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನೇತ್ರದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ವಿಶೇಷ ನಮನ ಸಲ್ಲಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಹಾಗೂ ಟೆನ್ನಿಸ್ ಕೃಷ್ಣ ಭಾಗಿಯಾಗಿ ಪುನೀತ್ ಜೊತೆ ಕೆಲಸ ಮಾಡಿದ ನೆನಪುಗಳನ್ನು ಮೆಲುಕು ಹಾಕಿದರು. ಇದೇ ವೇಳೆ ಗಾಯಕ ರಾಜೇಶ್ ಕೃಷ್ಣನ್ ಸೇರಿದಂತೆ ನೂರಾರು ಜನ ನೇತ್ರದಾನದ ಪತ್ರಕ್ಕೆ ಸಹಿ ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ