ರಂಗಾಯಣ ರಘು ಅಜ್ಞಾತವಾಸಿ: ಕನ್ನಡದ ಕ್ರೈಂ ಥ್ರಿಲ್ಲರ್ ನ್ನು ಈ ಒಟಿಟಿಯಲ್ಲಿ ತಪ್ಪದೇ ನೋಡಿ

Krishnaveni K

ಮಂಗಳವಾರ, 3 ಜೂನ್ 2025 (10:28 IST)
ಬೆಂಗಳೂರು: ಕೆಲವೊಂದು ಮಲಯಾಳಂ ಸಿನಿಮಾವನ್ನು ನೋಡಿ ಅಯ್ಯೋ ನಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಯಾಕೆ ನಿರ್ಮಾಣವಾಗಲ್ಲ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಅಪರೂಪಕ್ಕೆ ಬಂದಿರುವ ಅಜ್ಞಾತವಾಸಿ ಕೂಡಾ ಅಂತಹದ್ದೇ ಕ್ರೈಂ ಥ್ರಿಲ್ಲರ್ ಸಿನಿಮಾ. ಇದನ್ನು ಈಗಲೇ ಜೀ5 ಒಟಿಟಿಯಲ್ಲಿ ವೀಕ್ಷಿಸಿ.

ರಂಗಾಯಣ ರಘು ಹಾಸ್ಯ ನಟನಾಗಿ ಆರಂಭದಲ್ಲಿ ಗುರುತಿಸಿಕೊಂಡವರು. ಆದರೆ ಮೊದಲಾ ಸಲ ಎನ್ನುವ ಯಶ್ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರ ಮಾಡಿ ಸೀರಿಯಸ್ ಪಾತ್ರಗಳಿಗೂ ಸೈ ಎನಿಸಿಕೊಂಡರು. ಅವರು ಎಂಥಾ ಅದ್ಭುತ ಕಲಾವಿದ ಎನ್ನುವುದಕ್ಕೆ ಅವರು ಇತ್ತೀಚೆಗೆ ಆಯ್ಕೆ ಮಾಡುತ್ತಿರುವ ಕೆಲವು ಸಣ್ಣ ಬಜೆಟ್ ಸಿನಿಮಾಗಳೇ ಸಾಕ್ಷಿ.

ಕೆಲವು ದಿನಗಳ ಹಿಂದೆ ಶಾಖಾಹಾರಿ ಎನ್ನುವ ಸಿನಿಮಾ ಬಂದಿತ್ತು. ಕ್ರೈಂ ಥ್ರಿಲ್ಲರ್ ಸಿನಿಮಾವದು. ಅದರಲ್ಲಿ ರಂಗಾಯಣ ರಘು ಅದ್ಭುತ ಎನಿಸುವ ನಟನೆ ಮಾಡಿದ್ದರು. ಇದೀಗ ಅವರ ಅಂತಹದ್ದೇ ಮತ್ತೊಂದು ಸಿನಿಮಾ ಬಂದಿದೆ.

‘ಅಜ್ಞಾತವಾಸಿ’ ಎನ್ನುವ ಸಿನಿಮಾದಲ್ಲಿ ರಂಗಾಯಣ ರಘು ಮತ್ತೆ ಅಂತಹದ್ದೇ ಒಂದು ಪಾತ್ರ ಮಾಡಿದ್ದಾರೆ. ಇಲ್ಲಿ ಅವರು ಇನ್ಸ್ ಪೆಕ್ಟರ್ ಗೋವಿಂದು. ಪೊಲೀಸ್ ಅಧಿಕಾರಿಯಾಗಿ ಊರಿನಲ್ಲಿ ನಡೆಯುವ ಎರಡು ಕೊಲೆಗಳ ನಿಗೂಢ ರಹಸ್ಯವನ್ನು ಅವರು ಬೇಧಿಸುತ್ತಾರೆ. ಅದರ ರಹಸ್ಯವನ್ನು ಅಷ್ಟು ಸುಲಭವಾಗಿ ಹೇಗೆ ಬೇಧಿಸಿದರು ಎಂದು ಸಹೋದ್ಯೋಗಿ ಅನಂತು ಅಚ್ಚರಿಪಡುತ್ತಿದ್ದರೆ ಅವರ ಜೀವನದ ರಹಸ್ಯವೊಂದು ತೆರೆದುಕೊಳ್ಳುತ್ತದೆ.

ಸಿನಿಮಾ ಸುಮಾರು ಒಂದೂಮುಕ್ಕಾಲು ಗಂಟೆಯದ್ದು. ಈ ಒಂದೂ ಮುಕ್ಕಾಲು ಗಂಟೆಯೂ ನಿಮ್ಮಗೆ ಥ್ರಿಲ್ಲಿಂಗ್ ಅನುಭವ ಕೊಡುತ್ತದೆ. ರಂಗಾಯಣ ರಘುಗೆ ಪೈಪೋಟಿ ನೀಡುವಂತೆ ರವಿಶಂಕರ್ ಗೌಡ, ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ಯುವ ನಟ ಸಿದ್ದು ಮೂಲಿಮನಿ ಆಕಾಂಕ್ಷೆಗಳನ್ನು ಹೊತ್ತ ಯುವಕನಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬೇರೆ ಭಾಷೆಗಳಲ್ಲಿ ಬಂದಿದ್ದರೆ ಈ ಸಿನಿಮಾವನ್ನು ತಪ್ಪದೇ ನೋಡುತ್ತಿದ್ದೆವು. ಕನ್ನಡದಲ್ಲೇ ಬಂದಿದೆ, ಇನ್ನೇಕೆ ತಡ? ನಮ್ಮ ಅಪ್ಪಟ ಕನ್ನಡ ಸಿನಿಮಾವನ್ನು ತಪ್ಪದೇ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ