ನನ್ನ ಖಾಯಿಲೆಯನ್ನು ಬಲವಂತವಾಗಿ ಹೇಳಬೇಕಾಯಿತು: ಸಮಂತಾ ಋತು ಪ್ರಭು

Krishnaveni K

ಶನಿವಾರ, 16 ಮಾರ್ಚ್ 2024 (12:55 IST)
ಹೈದರಾಬಾದ್: ನಟಿ ಸಮಂತಾ ಋತು ಪ್ರಭು ತಮ್ಮ ಅನಾರೋಗ್ಯ ಮತ್ತು ವೃತ್ತಿ ಜೀವನದ ಒತ್ತಡದ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಮಿಯೋಸೈಟಿಸ್ ಖಾಯಿಲೆ ವಿಚಾರವನ್ನು ಬಹಿರಂಗವಾಗಿ ಹೇಳಲೇಬೇಕಾದ ಒತ್ತಡಕ್ಕೊಳಗಾದೆ ಎಂದಿದ್ದಾರೆ.

‘ನನ್ನ ಅನಾರೋಗ್ಯದ ಬಗ್ಗೆ ಸಾರ್ವಜನಿಕವಾಗಿ ಹೇಳಲು ಬಲವಂತಕ್ಕೊಳಗಾದೆ. ಬಹುಶಃ ನಾನಾಗಿಯೇ ಇದನ್ನು ಎಲ್ಲಿಯೂ ಹೇಳಲು ಇಷ್ಟಪಡುತ್ತಿರಲಿಲ್ಲ. ನನಗೆ ಖಾಯಲೆ ಇದೆ ಎಂದು ಗೊತ್ತಾದಾಗ ನನ್ನ ಒಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿತ್ತು. ನಾನು ಪ್ರಚಾರಕ್ಕೆ ಬರಲೇಬೇಕು. ಇಲ್ಲದೇ ಹೋದರೆ ಸಿನಿಮಾ ನೆಲಕಚ್ಚಬಹುದು ಎಂದು ನಿರ್ದೇಶಕರು ಹೇಳಿದ ಕಾರಣ ಅನಿವಾರ್ಯವಾಗಿ ಒಂದು ಸಂದರ್ಶನಕ್ಕೆ ಬರಲು ಒಪ್ಪಿಕೊಂಡಿದೆ. ಆದರೆ ನಾನಾಗ ವಿಪರೀತ ಔಷಧಿಗಳನ್ನು ತೆಗೆದುಕೊಂಡು ಸಂದರ್ಶನಕ್ಕೆ ಬರಬೇಕಾಯಿತು. ನಾನು ಬೇಡ ಎಂದರೂ ನನಗೆ ಏನಾಗಿದೆ ಎಂದು ಹೇಳಬೇಕಾಯಿತು’ ಎಂದು ಸಮಂತಾ ಹೇಳಿದರು.

‘ಆದರೆ ಜನ ನನ್ನನ್ನು ಅನುಕಂಪದ ರಾಣಿ ಎಂದು ವ್ಯಂಗ್ಯ ಮಾಡಿದರು. ನನ್ನ ವೃತ್ತಿ ಜೀವನ, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಅನುಭವಿಸಿದ್ದೇನೆ. ಈ ಮೊದಲು ನನ್ನ ಬಗ್ಗೆ ಕೆಟ್ಟದಾಗಿ ಬರೆದ ಲೇಖನಗಳನ್ನು ನೋಡುವಾಗ ಬೇಸರವಾಗುತ್ತಿತ್ತು. ಆದರೆ ಜನ ನನ್ನನ್ನು ಪ್ರಶ್ನೆ ಮಾಡುತ್ತಿದ್ದಂತೇ ನಾನು ಗಟ್ಟಿಯಾಗುತ್ತಾ ಹೋದೆ’ ಎಂದಿದ್ದಾರೆ.

ಇತ್ತೀಚೆಗೆ ಸಮಂತಾ ನಾಯಕಿಯಾಗಿ ನಟಿಸಿದ್ದ ಖುಷಿ ಸಿನಿಮಾ ಬಿಡುಗಡೆಯಾಗಿ ತಕ್ಕ ಮಟ್ಟಿಗೆ ಯಶಸ್ಸು ಪಡೆದಿತ್ತು. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕರಾಗಿ ಅಭಿನಯಿಸಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ