ಬೆಂಗಳೂರು: ಕನ್ನಡದ ದಿಯಾ ಸಿನಿಮಾ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ದ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿಕೊಂಡು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ರಾಮಮೂರ್ತಿ ಆರೋಪಿಸಿದ್ದಾರೆ.
ಈ ಸಂಬಂಧ ರಾಮಮೂರ್ತಿ ಎಂಬುವವರು ದೂರು ನೀಡಿದ್ದು, ಅದರ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನಿರ್ಮಾಪಕ ಕೃಷ್ಣಚೈತನ್ಯ, ಸೈನಪ್ಸಿ ಕಂಪನಿ ಎಂ.ಡಿ ಸಚಿನ್ ನಾರಾಯಣ್ ಹಾಗೂ ಸಹಚರರ ವಿರುದ್ದ ರಾಮಮೂರ್ತಿ ಅವರು ದೂರು ದಾಖಲಿಸಿದ್ದಾರೆ.
ರೈತ ರಾಮಮೂರ್ತಿ ಎಂಬವರು ತಮ್ಮ ಕಸವನಹಳ್ಳಿಯ ಸರ್ವೆ ನಂ.52 ರ 3.25 ಗುಂಟೆ ಜಮೀನನ್ನು ನರ್ಸರಿ ಮಾಡಲಿಕ್ಕೆ ಶಶಿಕಲಾ ಕೋದಂಡಚಾರಿ ಎಂಬವರಿಗೆ ಭೋಗ್ಯಕ್ಕೆ ನೀಡಿದ್ದರು. ರಾಮಮೂರ್ತಿ ಅವರು 2005ರಲ್ಲಿ ಈ ಜಮೀನು ಖರೀದಿಸಿದ್ದರು. ಈ ಜಮೀನನ್ನು 6 ಲಕ್ಷ ರೂಪಾಯಿ ಒಪ್ಪಂದಕ್ಕೆ ಶಶಿಕಲಾ ಕೋದಂಡಚಾರಿ ಪಡೆದುಕೊಂಡು, ಇಲ್ಲಿ ನರ್ಸರಿ ಮಾಡಿಕೊಂಡಿದ್ದರು.
ಆಗಸ್ಟ್ 13ರಂದು ಈ ಜಮೀನಿನ ಬಳಿ ಬಂದ ನಿರ್ಮಾಪಕ ಕೃಷ್ಣಚೈತನ್ಯ & ಸಹಚರರು ನಕಲಿ ದಾಖಲೆ ತೋರಿಸಿ ಶಶಿಕಲಾ ಕೋದಂಡಚಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಮಮೂರ್ತಿ ಆರೋಪಿಸಿದ್ದಾರೆ.