ಪತಿ ದರ್ಶನ್ ಗಾಗಿ ಕೊಲ್ಲೂರು ಮೂಕಾಂಬಿಕೆಗೆ ಮಳೆಯನ್ನೂ ಲೆಕ್ಕಿಸದೇ ಪೂಜೆ ಮಾಡಿದ ವಿಜಯಲಕ್ಷ್ಮಿ

Krishnaveni K

ಶುಕ್ರವಾರ, 26 ಜುಲೈ 2024 (09:46 IST)
Photo Credit: Facebook
ಉಡುಪಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಪತಿ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಈಗ ದೇವರ ಮೊರೆ ಹೋಗಿದ್ದಾರೆ. ಇಂದು ಆಷಾಢ ಶುಕ್ರವಾರ ನಿಮಿತ್ತ ಕೊಲ್ಲೂರು ಮೂಕಾಂಬಿಕೆಯ ದರ್ಶನ್ ಪಡೆದು ಪೂಜೆ ಮಾಡಿದ್ದಾರೆ.

ಆಷಾಢ ಶುಕ್ರವಾರ ದೇವಿಗೆ ವಿಶೇಷ. ಅದರಲ್ಲೂ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ನಡೆಯುತ್ತದೆ. ಇದೀಗ ಪತಿ ದರ್ಶನ್ ಬಿಡುಗಡೆಗೆ ವಿಜಯಲಕ್ಷ್ಮಿ ದೇವಿಯ ಮೊರೆ ಹೋಗಿದ್ದಾರೆ. ಕೊಲ್ಲೂರಿನಲ್ಲಿ ಚಂಡಿಕಾಹೋಮ ವಿಶೇಷವಾಗಿದೆ. ಹೀಗಾಗಿ ಇಂದು ಕಷ್ಟ ನಿವಾರಣೆಗಾಗಿ ವಿಜಯಲಕ್ಷ್ಮಿ ಚಂಡಿಕಾ ಹೋಮ ಮಾಡಿಸಿದ್ದಾರೆ.

ಮಳೆಯನ್ನೂ ಲೆಕ್ಕಿಸದೇ ವಿಜಯಲಕ್ಷ್ಮಿ ಭಾವುಕರಾಗಿ ದೇವಿಯ ಮುಂದೆ ಕಷ್ಟ ಪರಿಹರಿಸುವಂತೆ ಪ್ರಾರ್ಥನೆ ನಡೆಸಿದ್ದಾರೆ. ವಿಜಯಲಕ್ಷ್ಮಿಗೆ ಅವರ ಆಪ್ತರೂ ಸಾಥ್ ನೀಡಿದ್ದಾರೆ. ಮೂಕಾಂಬಿಕೆಯ ಸನ್ನಿಧಿಯಲ್ಲಿ  ಅವರು ಕೊಂಚ ಭಾವುಕರಾಗಿರುವಂತೆ ಕಂಡುಬಂದರು. ದರ್ಶನ್ ಬಿಡುಗಡೆಗೆ ವಿಜಯಲಕ್ಷ್ಮಿ ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗೆ ವಿಜಯಲಕ್ಷ್ಮಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಪತಿಯ ಬಿಡುಗಡೆಗೆ ಸಹಾಯ ಯಾಚಿಸಿದ್ದರು. ರಾಜಕೀಯ ಗಣ್ಯರ ಮೂಲಕ, ಪ್ರಭಾವೀ ವಕೀಲರನ್ನು ನೇಮಿಸುವ ಮೂಲಕ ವಿಜಯಲಕ್ಷ್ಮಿ ಕಾನೂನು ಹೋರಾಟ ನಡೆಸುತ್ತಲೇ ಇದ್ದಾರೆ. ಇದಲ್ಲದೆ, ಪತಿಯನ್ನು ಆಗಾಗ ಜೈಲಿಗೆ ಬಂದು ಭೇಟಿ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಇದನ್ನು ನೋಡಿ ವಿಜಯಲಕ್ಷ್ಮಿ ಬಗ್ಗೆ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪತ್ನಿ ಎಂದರೆ ಹೀಗಿರಬೇಕು ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ