ವಿಷ್ಣುವರ್ಧನ್ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಖಳನಟ ವಿಜಯ್ ರಂಗರಾಜು ನಿಧನ

Sampriya

ಸೋಮವಾರ, 20 ಜನವರಿ 2025 (18:45 IST)
Photo Courtesy X
ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ನಾಲಗೆ ಹರಿಬಿಟ್ಟು, ಅವರ ಅಭಿಮಾನಿಗಳಿಂದ ತೀವ್ರ ಆಕ್ರೋಶ ಎದುರಿಸಿದ್ದ ನಟ ವಿಜಯ್ ರಂಗರಾಜು ಅವರು ಇಂದು ಸಾವನ್ನಪ್ಪಿದ್ದಾರೆ.

ತೆಲುಗು, ಮಲಯಾಳಂ, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ರಂಗರಾಜು ಅವರು ಖಳನಟನಾಗಿ ಜನಪ್ರಿಯರಾಗಿದ್ದರು. ಇವರಿಗೆ ನಂದಮೂರಿ ಬಾಲಕೃಷ್ಣ ನಟನೆಯ ಭೈರವ ದ್ವೀಪಂ ಸಿನಿಮಾ ಖಡಕ್ ವಿಲನ್ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಕೆಲ ವಾರಗಳ ಹಿಂದೆ ಚಿತ್ರೀಕರಣದ ವೇಳೆ ರಂಗರಾಜು ಅವರು ಗಾಯಗೊಂಡಿದ್ದರು. ಚಿಕಿತ್ಸೆ ಬಳಿಕ ವಿಶ್ರಾಂತಿಯಲ್ಲಿದ್ದ ರಂಗರಾಜು ಅವರು ಇಂದು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಪುತ್ರಿಯರನ್ನು ರಂಗರಾಜು ಅಗಲಿದ್ದಾರೆ.

ರಂಗರಾಜು ಕನ್ನಡ ಸಿನಿಮಾ ಪ್ರೇಮಿಗಳ ತೀವ್ರ ಆಕ್ರೋಶವನ್ನು ಎದುರಿಸಿದ್ದರು. 2020 ರಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ರಂಗರಾಜು, ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್​ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು.  

ವಿಷ್ಣುವರ್ಧನ್, ನಟಿಯೊಬ್ಬಾಕೆಯನ್ನು ಛೇಡಿಸಿದ್ದರು ಆಗ ನಾನು ಆತನ ಕೊರಳುಪಟ್ಟಿ ಹಿಡಿದಿದ್ದೆ ಎಂದೆಲ್ಲ ಬಾಯಿಗೆ ಬಂದಂತೆ ಸುಳ್ಳು ಹೇಳಿದ್ದ. ಆ ಬಳಿಕ ಕನ್ನಡ ಸಿನಿಮಾ ಪ್ರೇಮಿಗಳು ಆತನ ಮನೆಗೆ ಹುಡುಕಿಕೊಂಡು ಹೋಗಿ ‘ಬುದ್ಧಿಕಲಿಸಿ’ ಬಂದಿದ್ದರು. ಘಟನೆಯ ಬಳಿಕ ರಂಗರಾಜು, ಕಣ್ಣೀರು ಹಾಕುತ್ತಾ ಕ್ಷಮೆ ಸಹ ಕೇಳಿದ್ದರು.

ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದ ವಿಜಯ್ ರಂಗರಾಜು ಹೆಸರು ಹಲವು ವಿವಾದಗಳಲ್ಲಿ ಕೇಳಿ ಬಂದಿತ್ತು. ವಿಜಯ್ ರಂಗರಾಜು ಮೂಲ ಹೆಸರು ರಾಜ್‌ಕುಮಾರ್.

ವಿಷ್ಣುವರ್ಧನ್ ಬಗ್ಗೆ ಮಾತ್ರವೇ ಅಲ್ಲದೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್​ಲಾಲ್, ಸೂಪರ್ ಸ್ಟಾರ್ ರಜನೀಕಾಂತ್ ಅವರುಗಳ ಬಗ್ಗೆಯೂ ಸಂದರ್ಶನಗಳಲ್ಲಿ ನಾಲಿಗೆ ಹರಿಬಿಟ್ಟಿದ್ದ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ