ಗಣಿ ಧಣಿಗಳ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದೇ ಹಿನ್ನೆಲೆಯ ಕಥಾನಕವನ್ನು ನೇಯ್ದು ಪೃಥ್ವಿ ಚಿತ್ರ ನಿರ್ಮಿಸಲಾಗಿದೆ. ಜನಪ್ರಿಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮಿಲನದ ಜೋಡಿಯಾದ ಪಾರ್ವತಿ ಮನನ್ ಜೊತೆ ಮತ್ತೆ ಪೃಥ್ವಿಯಾಗಿ ಅವತಾರವೆತ್ತಿದ್ದಾರೆ.
ಹೌದು. ನಿರ್ದೇಶಕ ಜೆಕಬ್ ವರ್ಗೀಸ್ ಉತ್ತಮ ಕಥಾಹಂದರವೊಂದನ್ನು ಚಿತ್ರವಾಗಿ ಮಾಡಿದ್ದಾರೆ. ಬಳ್ಳಾರಿ ಗಣಿದಣಿಗಳ ವಿರುದ್ಧ ಹೋರಾಡುವ ಜಿಲ್ಲಾಧಿಕಾರಿ ಪಾತ್ರದಲ್ಲಿ ಪುನೀತ್ ಮಿಂಚಿದ್ದಾರೆ. ಪುನೀತ್ ಈವರೆಗೆ ತನ್ನ ವೃತ್ತಿ ಜೀವನದಲ್ಲಿ ನಟಿಸಿದ ಇತರ ಪಾತ್ರಗಳಿಗಿಂತ ಭಿನ್ನವಾದ ಪಾತ್ರದ ಮೂಲಕ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅತ್ಯುತ್ತಮವಾಗಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ ಕೂಡಾ.
ವಿಪರೀತ ಬಿಸಿಲು, ಧೂಳಿನಿಂದ ಕೂಡಿದ ವಾತಾವರಣ, ಎಲ್ಲೆಲ್ಲೂ ಜೆಸಿಬಿ, ಲಾರಿಗಳ ಓಡಾಟ, ಚಾಲಕರ ದರ್ಪ, ರಾಜಕಾರಣಿಗಳ ಮದವೇರಿದ ಮಾತು ಇಂಥವಾತಾವರಣದಲ್ಲಿ ನ್ಯಾಯಕ್ಕಾಗಿ ಹೋರಾಡುವ ಜಿಲ್ಲಾಕಾರಿ ಎದುರಿಸುವ ಸಂಕಟ ಇದರಲ್ಲಿ ಉತ್ತಮವಾಗಿ ಚಿತ್ರಿಸಲಾಗಿದೆ. ಇಡೀ ಚಿತ್ರ ಬಳ್ಳಾರಿಯ ಇಂದಿನ ಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡುತ್ತದೆ. ಗಣಿ ದಣಿಗಳ ದರ್ಪ, ದುರಾಡಳಿತವನ್ನು ಇಂಚಿಂಚೂ ಬಿಚ್ಚಿಡುತ್ತದೆ. ಸವಾರಿಯಂಥ ಪ್ರೇಮ ಕಥೆಯನ್ನು ನವಿರಾಗಿ ನಿರೂಪಿಸಿದ ಜೇಕಬ್ ವರ್ಗೀಸ್ ಇದನ್ನೂ ಸವಾಲಿನ ರೀತಿ ಸ್ವೀಕರಿಸಿ ಗೆದ್ದಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.
MOKSHA
ಅಭಿನಯದ ವಿಷಯದಲ್ಲಿ ಪುನೀತ್ ಬಗ್ಗೆ ಎರಡು ಮಾತಿಲ್ಲ. ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎರಡೇ ಹೊಡೆದಾಟದ ದೃಶ್ಯವಿದ್ದು, ಅಲ್ಲಿಯೂ ಪುನೀತ್ ತನ್ನ ಕೈಚಳಕವನ್ನು ಯಶಸ್ವಿಯಾಗಿ ತೋರಿಸಿದ್ದಾರೆ. ಇವರ ಅಭಿನಯ, ಡೈಲಾಗ್ ಡೆಲಿವರಿ ಎಲ್ಲಾ ಈ ಗಂಭೀರ ಪಾತ್ರದ ಮೂಲಕ ಇನ್ನಷ್ಟು ಪಕ್ವಗೊಂಡಿದೆ. ಇನ್ನು ಪಾರ್ವತಿ ಮೆನನ್ ಬಗ್ಗೆಯೂ ಎರಡು ಮಾತಿಲ್ಲ. ಆಕೆಯ ಅಭಿನಯವೂ ಪುನೀತ್ ಜೊತೆಗೆ ಸ್ಪರ್ಧೆಗಿಳಿಯುವಂತಿದೆ. ಇಬ್ಬರದ್ದೂ ಪರಿಪಕ್ವ ಅಭಿನಯ. ಪಾರ್ವತಿಯನ್ನಂತೂ ಚಿತ್ರದಲ್ಲಿ ನೋಡುತ್ತಲೇ ಇರುವ ಎಂದೆನಿಸುವುದರೂ ಸುಳ್ಳಲ್ಲ.
ಒಟ್ಟಾರೆ ಕಥೆ ನಿರ್ದೇಶಕರ ಕೈಚಳಕದಿಂದ ಹೆಚ್ಚು ಮಾತಿಲ್ಲದೇ, ಹೊಡೆದಾಟ ಇಲ್ಲದೇ, ಮಚ್ಚು ಲಾಂಗುಗಳ ದರ್ಶನ ಇಲ್ಲದೇ ಚಿತ್ರ ಸಾಗುತ್ತದೆ. ಮಣಿಕಾಂತ್ ಕದ್ರಿ ಹಾಡು ಕೂಡಾ ಕಿವಿಗೆ ಈ ಬಿರು ಬೇಸಗೆಯಲ್ಲೂ ತಂಪೆನಿಸುತ್ತದೆ. ಸಾಧುಕೋಕಿಲ ಸಾಕಷ್ಟು ನಗಿಸಿದ್ದಾರೆ. ಅವರ ಯತ್ನಕ್ಕೆ ಸೈ ಎನ್ನಬಹುದು. ಅವಿನಾಶ್ ಖಳನಟರಾಗಿ ಗೆದ್ದಿದ್ದಾರೆ. ಶ್ರೀನಿವಾಸ್ ಮೂರ್ತಿ ತಂದೆಯ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನೀನಾಸಂ ಅಶ್ವತ್ಥ್, ಸಿ.ಆರ್. ಸಿಂಹ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಗಾಗಿ ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಬಂದ ಚಿತ್ರಗಳ ಪೈಕಿ ಉತ್ತಮ ಎನ್ನಬಹುದಾದ ಸಾಲಿಗೆ ಪೃಥ್ವಿಯನ್ನೂ ಧಾರಾಳವಾಗಿ ಸೇರಿಸಬಹುದು.