ಲಂಚ ಪಡೆದು ಸಿಕ್ಕಿಬಿದ್ದ ಕಂದಾಯ ಇಲಾಖೆಯ ಅಧಿಕಾರಿಗೆ 4 ವರ್ಷ ಜೈಲು

ಮಂಗಳವಾರ, 31 ಆಗಸ್ಟ್ 2021 (17:25 IST)
ಮೂರು ವರ್ಷಗಳ ಹಿಂದೆ ಖಾತೆ ಬದಲಾವಣೆ ಮಾಡಲು ಒಂದು ಲಕ್ಷ
ರೂ. ಲಂಚ ಪಡೆದು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಲೆಗೆ ಬಿದ್ದಿದ್ದ ಮಹಾಲಕ್ಷ್ಮೀಪುರ ವಾರ್ಡ್‍ನ ಸಹಾಯಕ ಕಂದಾಯ ಅಧಿಕಾರಿಗೆ 23ನೇ ಸಿಟಿ ಸಿವಿಲ್ ಕೋರ್ಟ್ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿದೆ.  
ಮಹಾಲಕ್ಷ್ಮೀಪುರ ವಾರ್ಡ್‍ನ ಸಹಾಯಕ ಕಂದಾಯ ಅಧಿಕಾರಿ ಲಿಂಗಯ್ಯ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ.  
ಸುಂಕದಕಟ್ಟೆ ಶ್ರೀಗಂಧ ಕಾವಲ್ ನಿವಾಸಿಯೊಬ್ಬರು 2017 ಮಾರ್ಚ್‍ನಲ್ಲಿ ಸ್ನೇಹಿತರ ಸ್ವತ್ತಿನ ಖಾತೆ ಬದಲಾವಣೆ ಮಾಡಲು ಬಿಬಿಎಂಪಿ ಮಹಾಲಕ್ಷ್ಮೀಪುರ ವಾರ್ಡ್ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಸ್ವತ್ತಿನ ಖಾತೆ ಬದಲಾವಣೆ ಮಾಡಲು ಲಿಂಗಯ್ಯ 2.50 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ನೀಡಲು ಇಚ್ಛಿಸದ ಅರ್ಜಿದಾರ ಈ ಬಗ್ಗೆ ಎಸಿಬಿಗೆ ದೂರು ಕೊಟ್ಟಿದ್ದರು. 2017 ಮಾ.28ರಂದು ದೂರುದಾರನಿಂದ ಲಿಂಗಯ್ಯ 1 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಆತನ ಕಚೇರಿ ಮೇಲೆ ದಾಳಿ ನಡೆಸಿ ಆತನ ವಿರುದ್ಧ ಕ್ರಮ ಕೈಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ಸಿಟಿ ಸಿವಿಲ್ ಮತು ್ತ ಸತ್ರ ನ್ಯಾಯಾಲಯಕ್ಕೆ 2017ನೇ ಸಾಲಿನಲ್ಲಿ ದೋಷರೊಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಕಳೆದ 3 ವರ್ಷಗಳಿಂದ ವಿಚಾರಣಾ ಹಂತದಲ್ಲಿತ್ತು. ಆ.30ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎಸಿಬಿ ಅಧಿಕಾರಿಗಳು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದಾಗ ಲಿಂಗಯ್ಯ ಭ್ರಷ್ಟಾಚಾರ ಎಸಗಿರುವುದು ಸಾಭಿತಾಗಿತ್ತು. ಹೀಗಾಗಿ ಲಿಂಗಯ್ಯನಿಗೆ 4 ವರ್ಷ ಶಿಕ್ಷೆ ಮತ್ತು 3 ಲಕ್ಷ ರೂ. ದಂಡ ವಿಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ