ಪತ್ನಿಯ ಕತ್ತು ಸೀಳಿದ 78ರ ವೃದ್ಧ!?

ಮಂಗಳವಾರ, 11 ಅಕ್ಟೋಬರ್ 2022 (09:34 IST)
ದಾವಣಗೆರೆ : ಸರಿಸುಮಾರು 50 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕಾದ ಗಲಾಟೆಯಿಂದ ವೃದ್ಧೆಯ ಕೊಲೆಯಾದ ಘಟನೆ ನಡೆದಿದೆ.

ದಾವಣಗೆರೆ ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹೆಗಡೆ ನಗರದಲ್ಲಿ ನಗರದ ನಿವಾಸಿ ವೃದ್ಧ ಚಮನ್ ಸಾಬ್ (78) ಅನ್ಯೋನ್ಯತೆಯಿಂದ 50 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.

ಇಬ್ಬರ ಮಕ್ಕಳನ್ನು ಹೆತ್ತು ಬೆಳೆಸಿದ್ದ ವೃದ್ಧೆ ಷಾಕೀರಾಬಾನು ಮಕ್ಕಳಿಗೆ ಮದುವೆ ಮಾಡಿಸಿ, ಅವರಿಗೆಂದೇ ಬೇರೆ ಮನೆ ಮಾಡಿಕೊಟ್ಟಿದ್ದರು. ಪತಿ-ಪತ್ನಿ ಇಬ್ಬರು ಒಂದು ಚಿಕ್ಕ ಮನೆಯಲ್ಲಿ ಜೀವನ ಮಾಡುತ್ತಿದ್ದರು. ಆದರೆ ಗಾರೇ ಕೆಲಸ ಮಾಡುತ್ತಿದ್ದ ವೃದ್ಧ ಚಮನ್ ಸಾಬ್ಗೆ ಮಾನಸಿಕ ಕಾಯಿಲೆ ಇತ್ತು.

ಈ ಹಿನ್ನೆಲೆಯಲ್ಲಿ ಮಕ್ಕಳು ಕೆಲಸ ಬಿಡಿಸಿ ಮನೆಯಲ್ಲಿಯೇ ಇರಿಸಿದ್ದರು. ಆದರೆ ನಿನ್ನೆ ಈದ್ ಮಿಲಾದ್ ಹಬ್ಬ ಇದ್ದರೂ ಕೂಡ ಯಾವುದೇ ಹಬ್ಬವನ್ನು ಆಚರಣೆ ಮಾಡದೆ ಜಗಳವಾಡಿದ್ದಾರೆ. ಈ ಜಗಳವೇ ಮಿತಿ ಮೀರಿ ಷಾಕೀರಾಬಾನುವನ್ನು ಆಕೆಯ ಪತಿ ಚಮನ್ ಸಾಬ್ ಹತ್ಯೆ ಮಾಡಿದ್ದಾನೆ. 

ಕೊಲೆಯಾದ ಷಾಕೀರಾಬಾನು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದು, ವೃದ್ಧ ಚಮನ್ ಸಾಬ್ನನ್ನು ಅಜಾದ್ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಸ್ಥಳಕ್ಕೆ ಎಸ್ಪಿಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಮನ್ ಸಾಬ್ ಹಲವು ವರ್ಷಗಳಿಂದಲೂ ಕೂಡ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದ ಎನ್ನಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ