ಲಿವ್ ಇನ್ ರಿಲೇಶನ್ಶಿಪ್ ಕೊಲೆಯಲ್ಲಿ ಅಂತ್ಯ

ಬುಧವಾರ, 30 ನವೆಂಬರ್ 2022 (19:32 IST)
ನೇಪಾಳ ಮೂಲದ ಸಹಜ ಸುಂದರಿ, ಹೆಸರು ಕೃಷ್ಣ ಕುಮಾರಿ. ಬೆಂಗಳೂರಿನ ರಾಮಮೂರ್ತಿ ನಗರದ ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಲ್ಲಿ ಸ್ನೇಹಿತ ಸಂತೋಷ್ ಧಮಿಯೊಂದಿಗೆ ವಾಸವಿದ್ದಳು. ಎರಡು ವರ್ಷಗಳಿಂದಲೂ ಇಬ್ಬರೂ ಲಿವ್ ಇನ್ ರಿಲೇಶನ್ಶಿಪ್ ಅಂತಾ ಒಂದೇ ಮನೆಯಲ್ಲಿ ಆರಾಮಾಗಿದ್ರು. ಆದರೆ ತಡರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ನಡೆದ ಜಗಳದಲ್ಲಿ ಕೃಷ್ಣಕುಮಾರಿಯ ಕೊಲೆಯಾಗಿದೆ. ಕೃಷ್ಣ ಕುಮಾರಿ ಮೇಲಿನ ಅನುಮಾನದಿಂದ ಆಕೆಯ ಕತ್ತು ಹಿಸುಕಿ ಸಂತೋಷ್ ಧಮಿ ಕೊಲೆಗೈದಿದ್ದಾನೆ. 

ಇಬ್ಬರೂ ಸಹ ನೇಪಾಳ ಮೂಲದವರು. ಕೃಷ್ಣಕುಮಾರಿ ಹೊರಮಾವು ಬಳಿ ಸ್ಪಾ ಒಂದರಲ್ಲಿ ಬ್ಯೂಟಿಷಿಯನ್ ಆಗಿದ್ಳು. ಸಂತೋಷ್ ಸಹ ಟಿ.ಸಿ.ಪಾಳ್ಯದ ಬಾರ್ಬರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ‌. ಎರಡು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ರಾಮಮೂರ್ತಿ ನಗರದಲ್ಲಿ ಒಂದೇ ರೂಂ ಬಾಡಿಗೆ ಪಡೆದು ವಾಸವಿದ್ರು. ಆದ್ರೆ ಸಂತೋಷ್ ಆಗಾಗ ಮನೆಗೆ ಸ್ನೇಹಿತರನ್ನ ಕರೆತಂದು ಪಾರ್ಟಿ ಮಾಡೋದು ಕೃಷ್ಣಕುಮಾರಿಗೆ ಇಷ್ಟವಿರಲಿಲ್ಲ. ಇತ್ತ ಕೃಷ್ಣಕುಮಾರಿ ಸದಾ ಪೋನ್ ನಲ್ಲಿ ಬ್ಯುಸಿ ಇರ್ತಾಳೆ. ಅವಳಿಗೆ ಬೇರೆ ಸಂಬಂಧವಿದೆ ಅಂತಾ ಸಂತೋಷ್ ಗೆ ಅನುಮಾನವಿತ್ತು. ನಿನ್ನೆ ಸಂತೋಷ್ ಸ್ನೇಹಿತರ ಜೊತೆ ರೂಮಿನಲ್ಲಿ ಪಾರ್ಟಿ ಮಾಡಿದ್ದ.ಮನೆಗೆ ಬಂದ ಕೃಷ್ಣಕುಮಾರಿ ಇದೇ ವಿಚಾರಕ್ಕೆ ಸಂತೋಷನೊಂದಿಗೆ ಜಗಳವಾಡಿದ್ಳು. ಸಂತೋಷ್ ಸಹ ಕೃಷ್ಣಕುಮಾರಿಯನ್ನ ಅನುಮಾನಿಸಿ ಗಲಾಟೆ ಆರಂಭಿಸಿದ್ದ.ಗಲಾಟೆ ಅತಿಯಾದಾಗ ಸಂತೋಷ್ ಕೃಷ್ಣಕುಮಾರಿ ತಲೆಗೆ ರಾಡ್ ನಿಂದ ಹಲ್ಲೆ ಮಾಡಿದ್ದ. ನೋವಿನಲ್ಲಿದ್ದ ಕೃಷ್ಣಕುಮಾರಿ ಸ್ನೇಹಿತೆಯರಿಗೆ ವಿಡಿಯೊ ಕಾಲ್ ಮಾಡಿ ವಿಷಯ‌ ತಿಳಿಸಿದ್ಳು. ಆದ್ರೆ ಸ್ನೇಹಿತೆಯರು ಕೃಷ್ಣಕುಮಾರಿ ಮನೆಗೆ ಬರುವಷ್ಟರಲ್ಲಿ ಕೃಷ್ಣಕುಮಾರಿಯ ಕತ್ತು ಹಿಸುಕಿ ಸಂತೋಷ್ ಕೊಲೆಗೈದಿದ್ದ.ಮನೆಗೆ ಬಂದ ಕೃಷ್ಣಕುಮಾರಿ ಸ್ನೇಹಿತೆಯರ ಜೊತೆ ಸೇರಿ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನವನ್ನೂ ಸಂತೋಷ್ ಮಾಡಿದ್ದ. ಆದ್ರೆ ಅಷ್ಟರಲ್ಲಾಗಲೇ‌ ಕೃಷ್ಣ ಕುಮಾರಿ ಮೃತಪಟ್ಟಿದ್ದಳು.

ಆಸ್ಪತ್ರೆಯಿಂದ ಬಂದ ಮಾಹಿತಿ‌ ಆಧರಿಸಿದ ರಾಮಮೂರ್ತಿ ನಗರ ಠಾಣಾ ಪೊಲೀಸರು ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ಸಂತೋಷ್ ನನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಮೃತಳಿಗೆ ಈಗಾಗಲೇ ಮದುವೆಯಾಗಿ ವಿಚ್ಚೇದನ ವಾಗಿದ್ದು ಒಂದು ಮಗು ಸಹ ಇದೆ ಎನ್ನಲಾಗಿದೆ. ಪೊಲೀಸರು ಸದ್ಯ ಆಕೆಯ ಕುಟುಂಬಸ್ಥರ ಮಾಹಿತಿ ಕಲೆಹಾಕ್ತಿದ್ದಾರೆ. ಒಟ್ನಲ್ಲಿ ಅನುಮಾನಕ್ಕೆ ಬಲಿಯಾದ ರಿಲೇಶನ್ಶಿಪ್ ಆಕೆಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ