ಮೂಡುಬಿದಿರೆ: ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯ ನಂಬರನ್ನು ಪಡೆದು ಆಕೆಗೆ ಆಶ್ಲೀಲ ಸಂದೇಶ ಕಳುಹಿಸಿ, ಪದೇ ಪದೇ ಕರೆ ಮಾಡಿದ ಆರೋಪದಡಿ ಮೂಡುಬಿದಿರೆ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮೂಡುಬಿದಿರೆಯ ತೋಡಾರು ಮೂಲದ ವಿವಾಹಿತ ಮಹಿಳೆಯೊಬ್ಬರು ಆಗಸ್ಟ್ 23ರಂದು ಕೌಟುಂಬಿಕ ಕಲಹದಡಿಯಲ್ಲಿ ದೂರನ್ನು ನೀಡಲು ಠಾಣೆ ಮೆಟ್ಟಿಲೇರಿದ್ದರು.
ಪ್ರಕರಣ ದಾಖಲಾದ ಬಳಿಕ ಇನ್ಸ್ಪೆಕ್ಟರ್ ಸಂದೇಶ ಅವರು ಪತಿ ಹಾಗೂ ಪತ್ನಿ ಇಬ್ಬರನ್ನು ಕರೆದು ಅವರ ನಡುವೆ ರಾಜಿ ಪಂಚಾತಿ ಮಾಡಿದ್ದರು.
ಆದರೆ ಅದೇ ಠಾಣೆಯ ಪೊಲೀಸ್ ಸಿಬ್ಬಂದಿ ಶಾಂತಪ್ಪ ಎಂಬಾತ ದೂರು ನೀಡಿದ ಮಹಿಳೆಯ ನಂಬರ್ ಪಡೆದು ಆಕೆಗೆ ಕರೆ ಹಾಗೂ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದಾರೆ.
ಈ ಸಂಬಂಧ ಸೆಪ್ಟೆಂಬರ್ 1ರಂದು ಮಹಿಳೆ ತನ್ನ ಸಹೋದರನೊಂದಿಗೆ ಠಾಣೆಗೆ ಬಂದು ಪೊಲೀಸ್ ಸಿಬ್ಬಂದಿ ಶಾಂತಪ್ಪ ವಿರುದ್ಧ ಕಾಲ್ ರೆಕಾರ್ಡ್ ಮತ್ತು ಕಾಲ್ ಲಿಸ್ಟ್ ಸಮೇತ ದೂರನ್ನು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿಜಿ ಅವರು ಮಂಗಳೂರು ಉತ್ತರ ಉಪವಿಭಾಗ ಪೊಲೀಸ್ ಉಪ ಆಯುಕ್ತರಾದ ಶ್ರೀಕಾಂತ್ ಅವರ ನಿರ್ದೇಶನದಂತೆ ಶಾಂತಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.