ಅಮಿತ್ ಶಾ ಅ ವರಿಗೆ ಇಂಗ್ಲಿಷ್ ಬರಲ್ವ?:ಎಚ್‌ಡಿಕೆ

ಶನಿವಾರ, 9 ಏಪ್ರಿಲ್ 2022 (20:31 IST)
ಬೆಂಗಳೂರು: ನಾನು, ಹಿರಿಯ ಸಾಹಿತಿ ಕುಂ ವೀರಭದ್ರಪ್ಪ  ಸೇರಿದಂತೆ 61 ಜನರಿಗೆ ಸಹಿಷ್ಣು ಹಿಂದೂ ಎಂಬ ಹೆಸರಿನಲ್ಲಿ ಒಡ್ಡಲಾಗಿರುವ ಜೀವ ಬೆದರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ಒತ್ತಾಯ ಮಾಡಿದರು.
 
ಈ ಬಗ್ಗೆ ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಇಂತಹ ಬೆದರಿಕೆ ಪತ್ರವನ್ನು ಲಘುವಾಗಿ ಪರಿಗಣಿಸಬೇಡಿ. ಕುಂ.ವೀರಭದ್ರಪ್ಪ ಸೇರಿ ಜೀವ ಬೆದರಿಕೆ ಒಡ್ಡಲಾಗಿರುವ ಎಲ್ಲ ಸಾಹಿತಿಗಳಿಗೆ ತಕ್ಷಣವೇ ಸರಕಾರವು ರಕ್ಷಣೆ ಕೊಡಬೇಕು ಎಂದು ಆಗ್ರಹಪಡಿಸಿದರು.
 
ದೇವರನ್ನು ನಾನು ನಂಬಿರುವೆ: ನನಗೆ ಈ ವಿಚಾರದಲ್ಲಿ ಅಂಜಿಕೆ ಇಲ್ಲ. ದೇವರನ್ನು ನಾನು ನಂಬಿರುವೆ. ನನ್ನ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಂಜಿ ಸತ್ಯವನ್ನು ಮರೆಮಾಚಲಾರೆ. ಹಣೆಯಲ್ಲಿ ಬರೆದಿರುವುದನ್ನು ತಿದ್ದಲು ಇವರಿಂದ ಆಗುವುದಿಲ್ಲ ಎಂದ ಅವರು, ನೇರವಾಗಿ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಎಂ ಎಂ ಕಲಬುರ್ಗಿ ಸೇರಿ ಕೆಲವರನ್ನು ಹತ್ಯೆ ಮಾಡಿದ ಉದಾಹರಣೆ ನಮ್ಮ ಮುಂದೆ ಇದೆ. ರಾಜ್ಯದಲ್ಲಿ ಮತ್ತೆ ಅಂಥ ಘಟನೆಗಳು ಮರುಕಳಿಸಬಾರದು ಎಂದು ಅವರು ಹೇಳಿದರು.
 
ಅಮಿತ್ ಶಾ ಅ ವರಿಗೆ ಇಂಗ್ಲಿಷ್ ಬರಲ್ವ?: ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ? ಎಂದು ಪ್ರಶ್ನಿಸಿದ ಅವರು, ಹಿಂದಿ ಹೇರಿಕೆ ವಿರುದ್ದ ಅಭಿಯಾನಕ್ಕೆ ನನ್ನ ಬೆಂಬಲ ಇದೆ.ಕನ್ನಡ ನಾಡಿನಲ್ಲಿ ಕನ್ನಡ ದೊಡ್ಡದು. ಇಲ್ಲಿ ಹಿಂದಿ ಹೇರಿಕೆ ನಡೆಯಲ್ಲ. ಕನ್ನಡ ಉಳಿಸಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು. ಹಿಂದಿ ಹೇರಿಕೆ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ