ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಆಫರ್ ಕೊಟ್ಟ ಅರವಿಂದ್ ಕೇಜ್ರಿವಾಲ್

Krishnaveni K

ಸೋಮವಾರ, 7 ಅಕ್ಟೋಬರ್ 2024 (15:17 IST)
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ ಆದರೆ ನೀವು ಇದೊಂದು ಷರತ್ತು ನೆರವೇರಿಸಿಕೊಡಬೇಕೆಂದು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆಫರ್ ಕೊಟ್ಟಿದ್ದಾರೆ.

ದೆಹಲಿ ಅಬಕಾರಿ ಅಕ್ರಮ ಹಗರಣದಲ್ಲಿ ಬಂಧಿತರಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇಜ್ರಿವಾಲ್ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೊನ್ನೆಯಷ್ಟೇ ಮುಖ್ಯಮಂತ್ರಿ ಅಧಿಕೃತ ಬಂಗಲೆಯನ್ನೂ ತೊರೆದಿದ್ದರು.

ಇದೀಗ ಛತ್ರಸಾಲ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಸಮಾವೇಶವೊಂದರಲ್ಲಿ ಮಾತನಾಡಿರುವ ಕೇಜ್ರಿವಾಲ್ ಬಿಜೆಪಿ ಪರವಾಗಿ ಪ್ರಚಾರ ಮಾಡುವ ಆಫರ್ ಕೊಟ್ಟಿದ್ದಾರೆ. ಆದರೆ ಅದಕ್ಕೆ ಒಂದು ಷರತ್ತು ಇದೆ. ನೀವು ನಿಮ್ಮ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡಬೇಕು ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.

ಡಬಲ್ ಎಂಜಿನ್ ಅಡಳಿತ ಎಂದರೆ ಡಬಲ್ ಲೂಟಿ ಎಂದ ಕೇಜ್ರಿವಾಲ್, ಮೋದಿಗೆ ತಾಕತ್ತಿದ್ದರೆ ತಮ್ಮ ಪಕ್ಷದ ಆಡಳಿತವಿರುವ 22 ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಲಿ. ಹಾಗೆ ಮಾಡಿದರೆ ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುವೆ ಎಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ