ಅಪರಾಧಗಳ ಹಿನ್ನೆಲೆ ಮಾತ್ರ ಗಣನೆ, ಧರ್ಮ ಅಲ್ಲ : ಆರಗ ಜ್ಞಾನೇಂದ್ರ

ಶುಕ್ರವಾರ, 23 ಸೆಪ್ಟಂಬರ್ 2022 (06:22 IST)
ಬೆಂಗಳೂರು : ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಕೇವಲ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣಿಸುತ್ತಾರೆಯೇ ವಿನಃ ಅಲ್ಪಸಂಖ್ಯಾತ,

ಬಹು ಸಂಖ್ಯಾತರು, ಜಾತಿ ಅಥವಾ ಧರ್ಮವನ್ನು ನೋಡಿ ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರ ವಿರುದ್ಧವೇ ಆಗಲಿ, ಕ್ರಮ ಜರಗಿಸಲಾಗುತ್ತದೆ. ಖಚಿತ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳು ಹಲವು ಕಡೆ ಶೋಧ ನಡೆಸಿದ್ದಾರೆ. ಶಿವಮೊಗ್ಗ ಪೊಲೀಸರು ಇಬ್ಬರು ವ್ಯಕ್ತಿಗಳು ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ ಎಂದರು. 

ತನಿಖೆಯನ್ನು ಚುರುಕಿನಿಂದ ನಡೆಸಿರುವ ಶಿವಮೊಗ್ಗ ಪೊಲೀಸರ ಕಾರ್ಯ ಕ್ಷಮತೆಯ ಬಗ್ಗೆ ಅಭಿನಂದಿಸುತ್ತೇನೆ ಎಂದು ಸಚಿವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ