ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಸರ್ಕಾರ ಪೀಕ್ ಅವರ್ ನಲ್ಲಿ ಒಬ್ಬೊಬ್ಬರೇ ಕಾರಿನಲ್ಲಿ ಓಡಾಡಿದರೂ ಟ್ಯಾಕ್ಸ್ ಹಾಕಲು ಚಿಂತನೆ ನಡೆಸಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು ಇದೊಂದು ಬಾಕಿ ಇತ್ತು ಎನ್ನುತ್ತಿದ್ದಾರೆ.
ಇದೀಗ ಕರ್ನಾಟಕದಲ್ಲಿ ಎಲ್ಲದಕ್ಕೂ ಟ್ಯಾಕ್ಸ್, ದುಬಾರಿ ದುನಿಯಾ ಎಂಬ ಸ್ಥಿತಿಯಾಗಿದೆ. ಬೆಂಗಳೂರಿಗರಿಗಂತೂ ಬಸ್, ಹಾಲು, ಮೆಟ್ರೋ ಎಲ್ಲವೂ ದುಬಾರಿ. ಕೊನೆಗೆ ಸಾರ್ವಜನಿಕರು ಬಳಸುವ ಪಬ್ಲಿಕ್ ಟಾಯ್ಲೆಟ್ ಶುಲ್ಕವೂ ಹೆಚ್ಚಾಗಿದೆ.
ಇಂತಹ ಹೊತ್ತಿನಲ್ಲೇ ಬ್ಯುಸಿ ವೇಳೆಯಲ್ಲಿ ಕಾರಿನಲ್ಲಿ ಒಬ್ಬರೇ ಕುಳಿತು ಓಡಾಡಿದರೆ ಅದಕ್ಕೂ ತೆರಿಗೆ ಹಾಕಲು ಮುಂದಾಗಿದೆ. ಒಬ್ಬರೇ ಕಾರಿನಲ್ಲಿ ಓಡಾಡುವ ಬದಲು ಸಾರ್ವಜನಿಕ ಸಾರಿಗೆಗಳನ್ನು ಬಳಸಬೇಕು. ಆಗ ವಾಹನ ದಟ್ಟಣೆಯೂ ಕಡಿಮೆಯಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರ.
ಆದರೆ ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗಿದ್ದರೆ ಇನ್ನು ನಾವು ಒಬ್ಬರೇ ಕಾರಿನಲ್ಲಿ ಓಡಾಡುವ ಅನಿವಾರ್ಯತೆ ಬಂದರೆ ಬೇಡವೆಂದರೂ ಇನ್ನೊಬ್ಬರನ್ನು ಕರೆದುಕೊಂಡು ಹೋಗಬೇಕಾ? ಕರ್ನಾಕಟದಲ್ಲಿ ಈಗಾಗಲೇ ವಿಪರೀತ ರಸ್ತೆ ತೆರಿಗೆ ಇದೆ. ಅದರ ಮೇಲೆ ಇದು ಬೇರೇನಾ? ಇದರಿಂದ ಸಮಸ್ಯೆ ಅನುಭವಿಸುವವರು ಮಧ್ಯಮ ವರ್ಗದ ಇಲ್ಲವೇ ಪ್ರಾಮಾಣಿಕವಾಗಿ ತೆರಿಗೆ ತೆತ್ತು ಜೀವನ ಮಾಡುವ ನಾಗರಿಕರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.