ಬಿಜೆಪಿ ಮುಖಂಡ ಚಿ.ನಾ.ರಾಮು ಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ

ಭಾನುವಾರ, 22 ಆಗಸ್ಟ್ 2021 (20:27 IST)
ಬೆಂಗಳೂರು: ಬಿಜೆಪಿ ಮುಖಂಡ, ಡಾ.ಅಂಬೇಡ್ಕರ್ ಫೌಂಡೇಷನ್‌ ನಿರ್ದೇಶಕ, ರಾಷ್ಟ್ರೀಯ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಚಿ.ನಾ.ರಾಮು ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಒಡ್ಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. 
 
ದೂರು ದಾಖಲು: 
 
ಅಪರಿಚಿತ ವ್ಯಕ್ತಿ ಫೋನ್‌ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಪರಿಚಯವಾಗಿದ್ದ ಮಹಿಳೆ ಮೊಬೈಲ್ ನಂಬರ್ ಪಡೆದು ವಾಟ್ಸ್ ಆಪ್ ಮೂಲಕ ನಮ್ಮ ವಿಡಿಯೋ ಕಾಲ್ ಮಾಡಿದ್ದಳು. ವಿಡಿಯೋ ದಲ್ಲಿ ಅಸಭ್ಯವಾಗಿ ವರ್ತಿಸಿದ್ದಳು. ಆ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 
 
ಸೈಬರ್ ಪೊಲೀಸರಿಂದ ತನಿಖೆ:
 
ಯುವತಿಯೊಂದಿಗೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ. ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಬೆಂಗಳೂರು ಸೆಂಟ್ರಲ್ ಸಿಇಎನ್ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
 
ವ್ಯಕ್ತಿಯ ಬೆದರಿಕೆ ಹೆದರಿ ಬಿಜೆಪಿ ಮುಖಂಡ ಚಿ.ನಾ.ರಾಮು ಈಗಾಗಲೇ 31,500 ರೂ ಹಣವನ್ನು ಅಪರಿಚಿತನ ಖಾತೆಗೆ ಜಮೆ ಮಾಡಿದ್ದಾರೆ. ದೂರನ್ನು ಆಧರಿಸಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಅಂಬೇಡ್ಕರ್ ಫೌಂಡೇಶನ್:
 
ಚಿ.ನಾ.ರಾಮು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಧೀನ ಸಂಸ್ಥೆಯಾದ ಅಂಬೇಡ್ಕರ್ ಫೌಂಡೇಶನ್ ನಿರ್ದೇಶಕರಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ