ಪ್ರತಿ ಊರಿನಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ನೆಲಕಚ್ಚಿದ್ದು, ಹಾನಗಲ್ನಲ್ಲಿಯೂ ಅವರನ್ನು ಮನೆಗೆ ಕಳಿಸಿದರೆ, ಅವರು ಖಾಯಂ ಆಗಿ ಮನೆಯಲ್ಲಿ ಇರುತ್ತಾರೆ ಎಂದರು. ಸುಳ್ಳು ಹೇಳುವವರಿಗೆ ಮನ್ನಣೆ ಕೊಡಬೇಡಿ ಎಂದು ಕರೆ ನೀಡಿದ ಮುಖ್ಯಮಂತ್ರಿಗಳು, ಎಲ್ಲಾ ಸಮುದಾಯಗಳ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಕಾಂಗ್ರಸ್ ಪಕ್ಷ ಹತಾಶಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದಾರಿ ತಪ್ಪಿಸುವ, ಸಮಾಜಗಳಿಗೆ ಅನ್ಯಾಯ ಮಾಡುವ ಕೆಲಸವನ್ನು ಮಾಡಿದ್ದಾರೆ. ಇಂದಿಗೂ ಅಲ್ಲಲ್ಲಿ ಅಸಮಾನತೆಯ ಕೂಗು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಮೊದಲಿನಿಂದಲೂ ಸಮಾನತೆ ತರುವ ಕೆಲಸ ಮಾಡಿದ್ದರೆ, ಈ ಕೂಗು ಇರುತ್ತಿರಲಿಲ್ಲ. ಹಾಗಾಗಿ ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಬೇಕು ಎಂದರು.
ನಮ್ಮದು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಅವರ ಮಾತುಗಳನ್ನು ಕೇಳುವ ಸರ್ಕಾರ ಎಂದು ಮುಖ್ಯಮಂತ್ರಿಗಳು, ಜನರಿಗೆ ಅಧಿಕಾರ ಮತ್ತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆಯಿತ್ತರು. ಯುವಕರಿಗೆ ಉದ್ಯೋಗ, ಸ್ತ್ರೀ ಶಕ್ತಿಸಂಘಗಳಿಗೆ ಆರ್ಥಿಕ ಬಲ ಕೊಡುವ ಕೆಲಸವನ್ನು ಸರ್ಕಾರ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರುನ್ನು ಶೀಘ್ರದಲ್ಲಿಯೇ ನೇಮಿಸುವುದಾಗಿ ತಿಳಿಸಿದರು.