ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ನಿಮ್ಮನ್ನೇ ಮುಂದುವರೆಸುವ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ನಗುತ್ತ ಉತ್ತರ ಕೊಟ್ಟ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲ ಜಿಲ್ಲಾಧ್ಯಕ್ಷರ ಅಭಿಪ್ರಾಯ ಪಡೆದು, ಪಕ್ಷದ ಮುಖಂಡರ ಅಭಿಮತ ಪಡೆದುಕೊಂಡು ಅಂತಿಮವಾಗಿ ಯಾರನ್ನು ಮಾಡಿದರೆ ಒಳ್ಳೆಯದು ಎಂಬ ಕುರಿತು ಅಂತಿಮ ನಿರ್ಧಾರ ಸದ್ಯವೇ ಆಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಅಮಿತ್ ಶಾ ಜೀ ಅವರ ಕಿವಿಮಾತು: ನಾನು ಮತ್ತು ಪಕ್ಷದ ಕೆಲವು ಹಿರಿಯ ಮುಖಂಡರು ನಿನ್ನೆ ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ಮಾರ್ಗದರ್ಶಕರಾದ ಅಮಿತ್ ಶಾ ಜೀ ಅವರನ್ನು ಭೇಟಿ ಮಾಡಿದ್ದೇವೆ. ಸುಮಾರು 20-25 ನಿಮಿಷಗಳ ಕಾಲ ಸುದೀರ್ಘವಾಗಿ ರಾಜ್ಯ ರಾಜಕಾರಣ, ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿದ್ದೇವೆ ಎಂದು ವಿವರಿಸಿದರು.
ಕಾಂಗ್ರೆಸ್ ಸರಕಾರವು ಆಡಳಿತಕ್ಕೆ ಬಂದಾಗಿನಿಂದ ಒಡೆದಾಳುವ ನೀತಿ ಅನುಸರಿಸುತ್ತಿದೆ. ಸರಕಾರವು ರಾಜ್ಯದ ಬಡವರು, ರೈತರಿಗೆ ಶಾಪವಾಗಿ ಪರಿಣಮಿಸಿದ ಕುರಿತು ಚರ್ಚೆ ಮಾಡಿದ್ದೇವೆ. ಅವರು ಸಮಾಧಾನದಿಂದ ಆಲಿಸಿದ್ದಾರೆ. ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶವಿದೆ. ಎಲ್ಲರೂ ವ್ಯತ್ಯಾಸಗಳನ್ನು ಮರೆತು ಒಟ್ಟಾಗಿ-ಒಂದಾಗಿ ಹೋಗಬೇಕೆಂದು ತಿಳಿಸಿದ್ದಾರೆ. ಆಗ ಮಾತ್ರ ಕಾರ್ಯಕರ್ತರಿಗೆ ಗೌರವ ಕೊಟ್ಟಂತಾಗುತ್ತದೆ. ಜನರು ನಮ್ಮಲ್ಲಿ ವಿಶ್ವಾಸ ಇಡುತ್ತಾರೆ ಎಂದು ಅವರು ಕಿವಿಮಾತನ್ನು ಹೇಳಿದ್ದಾಗಿ ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅದಕ್ಕಿಂತ ಹೆಚ್ಚಿನ ಹೊಣೆಗಾರಿಕೆಯು ವಿಪಕ್ಷಕ್ಕೂ ಇದೆ. ರಾಜ್ಯ ಸರಕಾರದ ಈಗಿನ ಕಾರ್ಯವೈಖರಿ, ಕಾಂಗ್ರೆಸ್ ಸರಕಾರದ ಕರಾಳ ಮುಖವನ್ನು ಜನರ ಮುಂದೆ ಅನಾವರಣಗೊಸುವ ಕೆಲಸವನ್ನು ನಾವು ವಿಪಕ್ಷವಾಗಿ ಮಾಡುತ್ತ ಬಂದಿದ್ದೇವೆ. ಇದೆಲ್ಲವನ್ನೂ ವಿವರಿಸಿದ್ದು, ಅಮಿತ್ ಶಾ ಜೀ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.