ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಭಗವಾಧ್ವಜ ಕಿತ್ತು ಹಾಕಿದ್ದಕ್ಕೆ ಬಿವೈ ವಿಜಯೇಂದ್ರ ಕಿಡಿ

Krishnaveni K

ಶನಿವಾರ, 18 ಅಕ್ಟೋಬರ್ 2025 (15:12 IST)
ಕಲಬುರಗಿ: ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ ಭಗವಾಧ್ವಜ ಕಿತ್ತು ಹಾಕಿರುವ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್ ಎಸ್ಎಸ್ ಶತಮಾನೋತ್ಸವ ಆಚರಣೆ ನಿಮಿತ್ತ ಭಗವಾಧ್ವಜ, ಫಲಕಗಳನ್ನು ಹಾಕಲಾಗಿತ್ತು. ಆದರೆ ಆರ್ ಎಸ್ಎಸ್ ಚಟುವಟಿಕೆಗಳಿಗೆ ಮೊನ್ನೆಯಷ್ಟೇ ರಾಜ್ಯ ಸರ್ಕಾರ ಪ್ರಿಯಾಂಕ್ ಖರ್ಗೆ ಸಲಹೆ ಮೇರೆಗೆ ನಿರ್ಬಂಧ  ವಿಧಿಸುತ್ತಿದ್ದಂತೇ ಇತ್ತ ಇವೆಲ್ಲವನ್ನೂ ಕಿತ್ತು ಹಾಕಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿವೈ ವಿಜಯೇಂದ್ರ ‘ಚಿತ್ತಾಪುರದಲ್ಲಿ ಪಾಳೇಗಾರಿಕೆ ರಾಜಕಾರಣ ಅಟ್ಟಹಾಸ ಮೆರೆಯುತ್ತಿದೆ, ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯವನ್ನು ದಮನ ಮಾಡಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಆರ್ ಎಸ್ಎಸ್ ಶತಮಾನ ಪೂರೈಸಿದ ಸಂಭ್ರಮ ಆಚರಿಸಲು ಸಂಘ ಹಾಗೂ ಹಿಂದೂ ಪರ ಸಂಘಟನೆಗಳು ನಿಯಮಾನುಸಾರ ಅನುಮತಿ ಪಡೆದು ಆಯೋಜಿಸಿದ್ದ ಸಂಘದ ಪಥಸಂಚಲನ ಕಾರ್ಯಕ್ರಮದ ಮೇಲೆ ಕೆಂಗಣ್ಣು ಬೀರಿರುವ ಸ್ಥಳೀಯ ಶಾಸಕರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ದ್ವೇಷ ರಾಜಕಾರಣವನ್ನು ಮುಂದುವರೆಸಿದ್ದಾರೆ.

ಚಿತ್ತಾಪುರದಲ್ಲಿ ನಿನ್ನೆ ತಡರಾತ್ರಿ ಪುರಸಭೆಯ ಸಿಬ್ಬಂದಿ ಸಂಘದ ಪಥಸಂಚಲನದ ಆಕರ್ಷಣೆಗಾಗಿ ಅನುಮತಿ ಪಡೆದು ಕಟ್ಟಲಾಗಿದ್ದ ಭಗವಾಧ್ವಜಗಳು, ಬಂಟಿಂಗ್, ಬ್ಯಾನರ್ ಗಳನ್ನು ಕಿತ್ತೆಸೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಆಚರಣೆಯನ್ನು ದುರುದ್ದೇಶ ಪೂರ್ವಕವಾಗಿ ತಡೆಯಲು ಯತ್ನಿಸಿರುವ ಘಟನೆ ಅತ್ಯಂತ ಖಂಡನೀಯ.

ಚಿತ್ತಾಪುರದಿಂದ ನಿಯಂತ್ರಿಸುತ್ತಿರುವ ರಿಪಬ್ಲಿಕ್ ಆಫ್ ಕಲಬುರಗಿಯನ್ನು ಧಿಕ್ಕರಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಲು ಬಿಜೆಪಿ ಜನರ ದನಿಯಾಗಿ ಹೋರಾಡಲಿದೆ. ಅಧಿಕಾರದ ಮದ ನೆತ್ತಿಗೇರಿಸಿಕೊಂಡಂತೆ ವರ್ತಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರೇ, ಈ ನೆಲದಲ್ಲಿ 'ದೇಶಭಕ್ತರನ್ನು ಕೆಣಕಿ ಉಳಿದವರಿಲ್ಲ' ಎಂಬ ವಾಸ್ತವಿಕ ಸತ್ಯ ನೆನಪಿರಲಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ