ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

Krishnaveni K

ಗುರುವಾರ, 5 ಜೂನ್ 2025 (19:27 IST)
ಬೆಂಗಳೂರು: ಆರ್.ಸಿ.ಬಿ. ಗೆಲುವಿನ ಸಂಬಂಧ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಹನ್ನೊಂದು ಯುವ ಮಕ್ಕಳ ಸಾವಿಗೆ ಕಾರಣ ನೇರವಾಗಿ ರಾಜ್ಯ ಸರ್ಕಾರವೇ ಹೊರಬೇಕಾಗಿದೆ. ಮಾನ್ಯ ಮುಖ್ಯಮಂತ್ರಿಗಳು (ಸಿಎಂ) ಮತ್ತು ಮಾನ್ಯ ಉಪ ಮುಖ್ಯಮಂತ್ರಿಗಳು (ಡಿಸಿಎಂ) ನೇರ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
 
ವಿಧಾನಸೌಧದ ಬಿಜೆಪಿ ಕಚೇರಿಯ ಪತ್ತಿಕಾಗೋಷ್ಠಿಯಲ್ಲಿ ಇಂದು ಅವರು ಮಾತನಾಡಿದರು. ಸಂಭ್ರಮಾಚರಣೆ ಮಾಡಬೇಕಾಗಿದ್ದದ್ದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯವರು, ಇವರು ಯಾಕೆ ಮಾಡಬೇಕಾಗಿತ್ತು ಎಂದು ಪ್ರಶ್ನಿಸಿದರು.
 
ಇಂತಹ ದುರ್ಘಟನೆಯಲ್ಲಿ ಮಡಿದವರಿಗೆ ಸರ್ಕಾರ ಕೇವಲ 10 ಲಕ್ಷಗಳ ಪರಿಹಾರ ಘೋಷಣೆ ಮಾಡಿರುವುದು ಸರಿಯಲ್ಲ,  ರೌಡಿಗಳು ಮತ್ತು ದೇಶದ್ರೋಹಿಗಳಿಗೆ 25 ಲಕ್ಷ ಕೊಡುತ್ತಾರೆ, ಅದೇ ರಾಜ್ಯ ಸರ್ಕಾರವೇ ಹೊಣೆಯಾಗಿರುವ ದುರ್ಘಟನೆಯಲ್ಲಿ ಮಡಿದವರಿಗೆ 10 ಲಕ್ಷ ಘೋಷಣೆ ಮಾಡಿರುವುದು ನಾಚಿಕೆಗೇಡಿನ ಸಂಗತಿ, ಜನರ ಪ್ರಾಣಕ್ಕೆ ಬೆಲೆಯಿಲ್ಲವೇ ಎಂದು ಸರ್ಕಾರದ ಕ್ರಮವನ್ನು ಖಂಡಿಸಿದರು.
ಕ್ರಿಕೆಟ್ ಟೀಮ್ ನಲ್ಲಿ 11 ಜನ ಆಟ ಆಡುತ್ತಾರೆ  ಹಾಗೆಯೇ ನಿನ್ನೆದಿನ ಕಾಲ್ತುಳಿತಕ್ಕೆ ಒಳಗಾಗಿ 11 ಜನರು ಮೃತಪಟ್ಟಿದ್ದಾರೆ, ಅಲ್ಲಿ ಹನ್ನೊಂದು ಜನರು ಆಡಿದರು, ಇಲ್ಲಿ ಹನ್ನೊಂದು ಜನರನ್ನು ಬಲಿ ಪಡೆದಿರಿ, ಮಾನ್ಯ ಮುಖ್ಯಮಂತ್ರಿಗಳು ಇದಕ್ಕೆ ತಾವು ಕಾರಣವೆಲ್ಲವೆಂದು ಪತ್ತಿಕಾ ಹೇಳಿಕೆ ಕೊಟ್ಟಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನೂ  ಬ್ಯಾಂಕ್ವೆಟ್ ಹಾಲ್‍ನಲ್ಲಿ ಮಾಡುತ್ತಾರೆ, ತಿಥಿ ಕಾರ್ಯಗಳನ್ನೂ ಮಾಡುವ ಸರ್ಕಾರಕ್ಕೆ ಸದರಿ ಸನ್ಮಾನ ಕಾರ್ಯಕ್ರಮವನ್ನು ಅಲ್ಲಿ ಮಾಡಲು ಏನು ತೊಂದರೆಯಾಗಿತ್ತು? ಎಂದು ಕೇಳಿದರು.

ಎಲ್ಲದಕ್ಕೂ ವಿರೋಧ ಪಕ್ಷದ ನಾಯಕರು ಕಾರಣವೆಂದು ದೂರುವ ಮಾನ್ಯ ಮುಖ್ಯಮಂತ್ರಿಯವರು ಇದಕ್ಕೆಲ್ಲಾ ಆರ್.ಎಸ್.ಎಸ್ ಮತ್ತು ಬಿಜೆಪಿಯವರು, ಸನ್ಮಾನ್ಯ ವಿಜಯೇಂದ್ರ, ಮಾನ್ಯ ಆಶೋಕ್ ಮತ್ತು ಛಲವಾದಿ ನಾರಾಯಣ ಸ್ವಾಮಿನೇ ಕಾರಣವೆಂದು ಯಾಕೆ ಹೇಳುತ್ತಿಲ್ಲವೆಂದು ಛೇಡಿಸಿದರು.
ಕಾಲ್ತುಳಿತ ಘಟನೆಯ ಬಗ್ಗೆ ಸ್ವಯಂಪ್ರೇರಿತ ಕೇಸ್ ದಾಖಲಿಸಿ, ನ್ಯಾಯಾಂಗ ತನಿಖೆಯಾಗಬೇಕು ಮತ್ತು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
 
ತಮಗಿರುವ ಮಾಹಿತಿಯ ಪ್ರಕಾರ 3.45 ಗಂಟೆಗೆ ಮೊದಲ ಬಲಿಯಾಯ್ತು. ವಿಧಾನಸೌಧದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು, ಕ್ರಿಕೆಟ್ ಕ್ರೀಡಾಪಟುಗಳು ಸುಮಾರು 4 ರಿಂದ 5 ಗಂಟೆಗೆ  ಆಗಮಿಸಿದರು, ವಿಧಾನಸೌಧದ ಎಲ್ಲಾ ಕಡೆಯೂ ಜನರು ತುಂಬಿದ್ದರು, ಸನ್ಮಾನ ಮುಗಿಯುವಷ್ಟರಲ್ಲಿ ಸುಮಾರು 7 ರಿಂದ 8 ಜನರು ಮೃತಪಟ್ಟಿರುವ ಬಗ್ಗೆ ಮಾಹಿತಿ ಹರಿದಾಡಿತು. ಇಷ್ಟೆಲ್ಲಾ ಆದರೂ ಮಾನ್ಯ ಮುಖ್ಯಮಂತ್ರಿಗಳು ಜನಾರ್ಧನ ಹೋಟೆಲಿಗೆ ತೆರಳಿ ದೋಸೆ ತಿಂದಿದ್ದಾರೆ, ಸೂತಕದ ಮನೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಯಾರೆಂಬಂತಾಗಿದೆ ಎಂದು ಟೀಕಿಸಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ