ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ಆರ್ ಸಿಬಿ ವಿಜಯೋತ್ಸವದ ದಿನ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ವಿರಾಟ್ ಕೊಹ್ಲಿ ಸ್ನೇಹಿತ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರ ಭವಿಷ್ಯ ಇಂದು ತೀರ್ಮಾನವಾಗಲಿದೆ.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ಬಗ್ಗೆ ಇಂದು ಹೈಕೋರ್ಟ್ ನಲ್ಲಿ ತೀರ್ಪು ಬರಲಿದೆ. ನಿನ್ನೆ ಸರ್ಕಾರದ ಪರ ಮತ್ತು ಕೆಎಸ್ ಸಿಎ ಪರ ವಾದ ವಿವಾದಗಳು ಜೋರಾಗಿಯೇ ನಡೆದಿದ್ದವು. ಪ್ರಕರಣದ ಬಗ್ಗೆ ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲರು ಆರ್ ಸಿಬಿ ಮತ್ತು ಕೆಎಸ್ ಸಿಯೇ ಕಾರ್ಯಕ್ರಮ ಆಯೋಜಿಸಿದ್ದು. ಇದರಲ್ಲಿ ಸರ್ಕಾರದ ತಪ್ಪಿಲ್ಲ ಎಂದು ವಾದ ಮಂಡಿಸಿದ್ದರು. ಇನ್ನು ಆರ್ ಸಿಬಿ ಸಿಬ್ಬಂದಿಗಳಾದ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರು ರಾತ್ರೋ ರಾತ್ರಿ ಬೆಂಗಳೂರಿನಿಂದ ಪಲಾಯನ ಮಾಡಲು ಯತ್ನಿಸಿದ್ದರು ಎಂದು ವಾದಿಸಿದ್ದರು.
ಇನ್ನು, ಆರ್ ಸಿಬಿ ಪರ ವಾದ ಮಂಡಿಸಿರುವ ವಕೀಲರು ಪ್ರಕರಣದಲ್ಲಿ ಸರ್ಕಾರ ತನ್ನ ತಪ್ಪಿಲ್ಲ ಎನ್ನುತ್ತಿದೆ. ಆದರೆ ಕೆಎಸ್ ಸಿಎ ಸಲ್ಲಿಸಿದ ಪತ್ರವನ್ನು ಸರ್ಕಾರವೇ ನ್ಯಾಯಾಲಯದ ಮುಂದಿಟ್ಟಿದೆ. ಹೀಗಿರುವಾಗ ಸರ್ಕಾರಕ್ಕೆ ಗೊತ್ತೇ ಇರಲಿಲ್ಲ ಎನ್ನಲು ಹೇಗೆ ಸಾಧ್ಯ? ಅಲ್ಲದೆ, ಸಿಎಂ ಅಣತಿಯಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಇದು ಕಾನೂನು ಬಾಹಿರ. ಹೀಗಾಗಿ ನಮ್ಮ ಕಕ್ಷಿದಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಾದ ಮಂಡಿಸಿದ್ದರು. ಇಂದು ಆರೋಪಿಗಳ ಜಾಮೀನು ನಿರ್ಧಾರವಾಗಲಿದೆ.