ಕಾನೂನು ಕೈಗೆ ತೆಗೆದುಕೊಂಡರೆ ಸಹಿಸುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ

ಸೋಮವಾರ, 11 ಏಪ್ರಿಲ್ 2022 (15:11 IST)
ನಮ್ಮದು ಸಂವಿಧಾನಬದ್ಧವಾಗಿ ರಚನೆಯಾಗಿರುವ ಸರ್ಕಾರ. ಕಾನೂನು ಸುವ್ಯವಸ್ಥೆ ಮತ್ತು ಸಮಾನತೆ ಎಂಬ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದೇವೆ. ಅವರವರ ವಿಚಾರಗಳನ್ನು ಪ್ರಚಾರ ಮಾಡಿದರೆ ತೊಂದರೆ ಇಲ್ಲ. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡಾಗ ಅಥವಾ ಹಿಂಸೆಗಿಳಿದಾಗ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಅವರು ಇಂದು ಉಡುಪಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಾನೂನಿನ ಪ್ರಕಾರ ನಡೆಯುವುದು ನಮ್ಮ ಕೆಲಸ
ಮಂಗಳೂರಿನಲ್ಲಿ ಲವ್ ಜಿಹಾದ್ ಬಗ್ಗೆ ಹಿಂದೂ ಟಾಸ್ಕ್ ಫೋರ್ಸ್ ರಚಿಸಲಾಗುತ್ತಿರುವ ಬಗ್ಗೆ ಮಾತನಾಡಿ ಎಲ್ಲದ್ದಕ್ಕೂ ಕಾನೂನಿದೆ. ಮತ್ತು ಕೆಲವು ಕಾನೂನುಗಳನ್ನು ಹಿಂದಿನ ಸರ್ಕಾರಗಳೇ ಮಾಡಿವೆ. ಅವುಗಳನ್ನು ಬಿಟ್ಟು ನಾವು ಹೊಸ ಕಾನೂನು ಮಾಡುತ್ತಿಲ್ಲ. ಕಾನೂನಿನ ಪ್ರಕಾರ ನಡೆಯುವುದು, ಕಾನೂನು ರಕ್ಷಿಸುವುದು ನಮ್ಮ ಕೆಲಸ ಎಂದರು. 
ನಮ್ಮ ಕೆಲಸಗಳು ಮಾತನಾಡಬೇಕು. ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಮುಖ್ಯಮಂತ್ರಿಗಳು ಮೌನವಾಗಿದ್ದೀರಿ ಎಂದು ವಿಪಕ್ಷ ಗಳು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನನ್ನ ಕ್ರಮಗಳೇ ಮಾತನಾಡುತ್ತಿವೆ. ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳ ಬೇಕು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಮಗೆ ತಿಳಿದಿದೆ. ಇವರಿಂದ ಏನು ಕಲಿಯಬೇಕಿಲ್ಲ. ಇವರು ಹಲವಾರು ಕೊಲೆಗಳಿಗೆ ನೇರವಾಗಿ ಆರೋಪ ಇರುವ ಸಂಸ್ಥೆಗಳ ಪ್ರಕರಣಗಳನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಕೈಬಿಟ್ಟರಲ್ಲ. ಆಗ ಇವರ ಕರ್ತವ್ಯ ಪ್ರಜ್ಞೆ ಎಲ್ಲಿತ್ತು?ನಮ್ಮ ರಾಜ್ಯ ಶಾಂತಿ ಸುವ್ಯವಸ್ಥೆ ಇರುವ ಅತ್ಯಂತ ಪ್ರಗತಿಪರ ರಾಜ್ಯ. ರಾಜ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕೆಂದು ಗೊತ್ತಿದೆ. ಅದನ್ನು ಮಾಡಿ ತೋರಿಸುತ್ತಿದ್ದೇವೆ ಎಂದರು.   
ಸಿದ್ದರಾಮಯ್ಯ ತಮ್ಮ ಕಾಲದಲ್ಲಿ ಹತ್ತು ಹಲವಾರು ಹಿಂದೂ ಯುವಕರ ಕೊಲೆಗಳಾದವು. ಆ ಸಂಸ್ಥೆಗಳ ಮೇಲಿನ ಪ್ರಕರಣವನ್ನೇ ಹಿಂಪಡೆದರಲ್ಲ. ಆಗ ಅವರು ಬುದ್ದಿ ಕಳೆದುಕೊಂಡಿದ್ದರೇ ಎಂದು ಅವರು ಪ್ರಶ್ನಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ