ಬೆಂಗಳೂರು: ವಿಧಾನಸೌಧದಲ್ಲಿ ಆರ್ ಸಿಬಿ ಆಟಗಾರರಿಗೆ ಸನ್ಮಾನ ಮಾಡಲು ಒತ್ತಡ ಹೇರಿದ್ದೇ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಮೊನ್ನೆ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿಯದ್ದೇ ಓಡಾಟವಿತ್ತು. ಆಟಗಾರರಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಿದ್ದೂ ಕಂಡುಬಂದಿತ್ತು.
ಇದೀಗ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಗೋವಿಂದರಾಜ್ ಒತ್ತಡದ ಮೇರೆಗೇ ವಿಧಾನಸೌಧದಲ್ಲಿ ಕಾರ್ಯಕ್ರಮ ಏರ್ಪಡಿಸಲಾಯಿತು ಎಂದು ಬಾಂಬ್ ಸಿಡಿಸಿದ್ದರು. ಇದರಿಂದಾಗಿ ಪೊಲೀಸರು ರಾತ್ರಿಯಿಡೀ ನಿದ್ದೆಗೆಟ್ಟು ಭದ್ರತೆ ಒದಗಿಸಿದ್ದರು. ನಂತರ ಎರಡೂ ಕಡೆ ಭದ್ರತೆ ಒದಗಿಸಲು ಪೊಲೀಸರಿಗೆ ಕಷ್ಟವಾಯಿತು. ಇದರಿಂದಾಗಿಯೇ ಎಡವಟ್ಟಾಗಿದೆ ಎಂದು ಕುಮಾರಸ್ವಾಮಿ ದೂರಿದ್ದರು.
ಇದರ ಬೆನ್ನಲ್ಲೇ ಈಗ ಗೋವಿಂದರಾಜ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. 2023 ರಿಂದ ಗೋವಿಂದರಾಜ್ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.