ಬಿಜೆಪಿ ಶಾಸಕ ಸಿಟಿ ರವಿಗೆ ಕಾಂಗ್ರೆಸ್ ಮುಖಂಡ ಸಯೀದ್ ಅಹ್ಮದ್ ಚಾಲೆಂಜ್

ಶನಿವಾರ, 4 ಸೆಪ್ಟಂಬರ್ 2021 (18:58 IST)
ನಮ್ಮದೇಶದಲ್ಲಿ ಯಾವುದಾದರೊಂದು ಮದ್ರಸಾದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ತರಬೇತಿ ನೀಡಿದ್ದು ಸಾಬೀತಾದಲ್ಲಿ ಸಿಟಿ‌ ರವಿ ಏನು ಹೇಳುತ್ತಾರೋ, ಅದನ್ನು ಮಾಡಲು‌ ತಾನು ತಯಾರೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸಯೀದ್ ಅಹ್ಮದ್ ಚಾಲೆಂಜ್ ಮಾಡಿದ್ದಾರೆ.
ಮಂಗಳೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಚುನಾವಣೆ ಗೆಲ್ಲಬೇಕೆಂದರೆ ಹಿಂದೂ-ಮುಸ್ಲಿಂ ವಿಚಾರ, ಪಾಕಿಸ್ತಾನ-ಭಾರತ ವಿಚಾರ ಎತ್ತಬೇಕು. ಈಗ ತಾಲಿಬಾನ್ ವಿಚಾರವನ್ನು ಮುಂದಿಟ್ಟಿದ್ದಾರೆ. ಮದ್ರಸಾದಲ್ಲಿ ಕುರಾನ್ ಬೋಧನೆ ಮಾಡಲಾಗುತ್ತದೆ. ಕುರಾನ್ ಓದಿ ಅರ್ಥ ತಿಳಿದುಕೊಂಡವರು ಯಾರೂ ಮದ್ರಸಾದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಲಿಕ್ಕಿಲ್ಲ.‌ ಈ ದೇಶದ ಬಾವುಟ ರಚಿಸಿದಾಕೆ ಓರ್ವ ಮುಸ್ಲಿಂ ಮಹಿಳೆ. ಆದರೆ ಬಿಜೆಪಿಗರು ಮುಸ್ಲಿಮರನ್ನು ತಾಲಿಬಾನಿಗಳೆಂದು ಹೇಳುತ್ತಾರೆ. ನಾಚಿಕೆಯಾಗಬೇಕು ಇವರಿಗೆ ಎಂದು ಕಿಡಿಕಾರಿದರು.
ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಗಳು  ಆ ರೀತಿ ಮಾಡಿದರೆ, ಭಾರತದ ಮುಸ್ಲಿಮರೇನು ಮಾಡಬೇಕು. ನಮಗೂ ಅದಕ್ಕೂ ಏನು ಸಂಬಂಧ. ಆದ್ದರಿಂದ ಈ ರೀತಿ ಮಾತನಾಡುತ್ತಿರುವ ಬಸವರಾಜ್ ಯತ್ನಾಳ್, ಸಿ.ಟಿ.ರವಿ ಮೇಲೆ ಪ್ರಕರಣ ದಾಖಲಾಗಲಿ. ಮುಂದಿನ‌ ಅಸಂಬ್ಲಿ ಚುನಾವಣೆಯಲ್ಲಿ ಯತ್ನಾಳನ್ನು ಯತ್ತಂಗಡಿ ಮಾಡಿಸುತ್ತೇವೆ. ಅವರು ಹೇಗೆ ಗೆಲ್ಲುತ್ತಾರೆ ಎಂಬುದನ್ನು ನೋಡುತ್ತೇವೆ ನಾವು. ಈ ದೇಶ ಉಳಿಯಬೇಕೆಂದರೆ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಒಂದಾಗಿ ಬದುಕಿದರೆ ಏನೂ ಸಮಸ್ಯೆ ಇರೋದಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ