'ಕಾಮ'ನ್ ಚಿತ್ರ 'ಜೂಮ್' ಮಾಡಿಲ್ವಂತೆ...! ಟಿಪ್ಪು ಜಯಂತಿಯಲ್ಲಿ ಹೋದ ಮಾನ, ರಾಜೀನಾಮೆ ಕೊಟ್ರೂ ವಾಪಸ್ ಬರಲ್ವೇ..?

ಶನಿವಾರ, 12 ನವೆಂಬರ್ 2016 (10:52 IST)
ಬೆಂಗಳೂರು: ಶಿಕ್ಷಣ ಸಚಿವ ತನ್ವೀರ್ ಶೇಠ್ ಮನೆಗೆ ಹೋಗದೆ ಮೂರು ತಿಂಗಳಾಗಿತ್ತಂತೆ. ಅದ್ಕೆ ಮೊಬೈಲ್'ನಲ್ಲಿ ಅಶ್ಲೀಲ ಚಿತ್ರ ನೋಡಿದ್ರಂತೆ..!!

 
ಯಲಾ.. ಯಲಾ.. ಸಚಿವ್ರೆ! ಎಂಥ ಅಸಹನೀಯ ಸಮರ್ಥನೆ ಮಾಡ್ಕೊಂಡು ಇದ್ದಿರೋ ಅಲ್ಪ ಸ್ವಲ್ಪಾನೂ ಮರ್ಯಾದೆ ಹರಾಜ ಮಾಡ್ಕೊಂಡ್ರಲ್ರಿ. 'ಮನೆಗೆ ಹೋಗ್ದೆ ಮೂರು ತಿಂಗಳಾಯಿತು' ಅನ್ನೋ ಮಾತು ಏನರ್ಥ ಕೊಡ್ತವೆ ಅನ್ನೋದು ನಿಮ್ಮ ಗಮನಕ್ಕೆ ಬರ್ದೆ ಹೋಯ್ತೇ? ಛೀ.. ಮಾಡಿರೋ ಘನಂಧಾರಿ ಕೆಲಸಕ್ಕೆ, ಅಷ್ಟೇ ಘನಂಧಾರಿ ಉತ್ತರ ಬೇರೆ. ಅದೂ ಮಾಧ್ಯಮದ ಎದುರು..!
ಅಲ್ಲಾ, ಸಚಿವರೆ.. ವಿದೇಶದಲ್ಲಿರುವ ಲೈಂಗಿಕ ಶಿಕ್ಷಣವನ್ನು ನೀವು ಕರ್ನಾಟಕದಲ್ಲಿ ಜಾರಿಗೆ ತರೋದು ಹೇಗೆ ಅಂತ ನೋಡ್ತಾ ಇದ್ದೆ ಅನ್ನೋ ಇನ್ನೊಂದು ಹೇಳಿಕೆ ನೀಡಿದ್ರಲ್ಲ... ಅರೆನಗ್ನ ಚಿತ್ರ ನೋಡ್ಕಂಡೆ ಅದನ್ನ ಜಾರಿಗೆ ತರ್ಬೇಕಾ? ಅದ್ಕೆ ಸಾರ್ವಜನಿಕ ಸಮಾರಂಭವೇ ಆಗ್ಬೇಕಾ ನಿಮಗೆ?
 
ತಪ್ಪನ್ನು ತಿದ್ದಿಕೊಳ್ಳೋ ಭರದಲ್ಲಿ ಸಚಿವ ತನ್ವೀರ್ ಶೇಠ್ ಸ್ಥಿಮಿತ ಕಳೆದುಕೊಂಡು ಮಾತಾಡಿದ್ದಾರೆ ಅನ್ನೋದರಲ್ಲಿ ಎರಡು ಮಾತಿಲ್ಲ. ಏನು ಮಾತಾಡಬೇಕೆಂದು ತಿಳಿಯದೆ, ಆ ಕ್ಷಣಕ್ಕೆ ಏನು ತೋಚಿದೆಯೋ ಅದನ್ನು ಮಾತಾಡಿ ಪ್ರಕರಣಕ್ಕೆ ಇನ್ನಷ್ಟು ತುಪ್ಪವನ್ನು ತಾವೇ ಸುರಿದುಕೊಂಡಿದ್ದಾರೆ. ತೇಪೆ ಹಚ್ಚಲು ಹೋಗಿ ತಮ್ಮಲ್ಲಿರುವ ತಡಿಯಲಾರದ ಕೆಲವು ಭಾವನೆಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿಕೊಂಡಿದ್ದಾರೆ. ಮೂರು ತಿಂಗಳುಗಳ ಕಾಲ ಮನೆಗೆ ಹೋಗಿಲ್ವಂತೆ..!
 
ಇದು ಅರೆನಗ್ನ ಚಿತ್ರ ನೋಡಿದ ಸಚಿವರ ಪುರಾಣವಾದರೆ.‌‌‌.. ಅವರನ್ನು ಸಮರ್ಥಿಸಿಕೊಂಡು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಅವರದ್ದು ಇನ್ನೂ ವಿಭಿನ್ನ ಹೇಳಿಕೆ. ತನ್ವೀರ್ ಶೇಠ್ ಏನೂ ತಪ್ಪೇ ಮಾಡಿಲ್ವಂತೆ. ಕೇವಲ ಐದು ಸೆಕೆಂಡ್ ಅಷ್ಟೇ ಯಾವುದೋ ಚಿತ್ರ ನೋಡಿದ್ರಂತೆ. ಅದೂ ಅಲ್ದೆ ಬಿಜೆಪಿಯವರಂತೆ 'ಜೂಮ್' ಮಾಡಿ ನೋಡಿಲ್ವಂತೆ...!
 
ಈ ಸಮರ್ಥನೆಗೆ ನಗೋದೊಂದು ಬಿಟ್ರೆ ಇನ್ನೇನೂ ಇಲ್ಲ. ಕ್ಯಾಮರಾ ಕಣ್ಣಲ್ಲಿ ಶೇಠ್ ಅವರು ಅರೆನಗ್ನ ಚಿತ್ರ ನೀಡ್ತಾ ಇರೋದು ಅಷ್ಟೊಂದು ಸ್ಪಷ್ಟವಾಗಿ ಕಾಣ್ತಾ ಇದೆ. ಸರಿಕಾರಿ ಕಾರ್ಯಕ್ರಮದಲ್ಲಿ ಸಚಿವನಾದಂತ ವ್ಯಕ್ತಿ ಮೈಮರೆತು ಹೀಗೆಲ್ಲ ಮಾಡುವುದು ದಿನೇಶ ಗುಂಡೂರಾವ್ ಅವರ ದೃಷ್ಟಿಯಲ್ಲಿ ತಪ್ಪಲ್ವಂತೆ. ಐದು ಸೆಕೆಂಡ್'ಗಿಂತ ಹೆಚ್ಚು ನೋಡಿದ್ರೆ ಬಹುಶಃ ತಪ್ಪಾಗಿರ್ತಿತ್ತೇನೋ..? ಅದೂ ಅಲ್ದೆ 'ಜೂಮ್' ಮಾಡಿ ನೋಡಿಲ್ವಂತೆ.
 
ಅಂದ್ರೆ, ಜೂಮ್ ಮಾಡಿ ನೋಡಿದ್ರೆ ಮಾತ್ರ ನಗ್ನ ಚಿತ್ರ. ಇಲ್ಲಾಂದ್ರೆ 'ಕಾಮ'ನ್ ಚಿತ್ರ ಅಂತ ಅರ್ಥ ಇರ್ಬೇಕು ದಿನೇಶ ಗುಂಡೂರಾವ್ ಅವರ ದೃಷ್ಟಿಯಲ್ಲಿ. ತಪ್ಪನ್ನು ತಪ್ಪಲ್ಲ ಎಂದು ಸಮರ್ಥಿಸಿಕೊಳ್ಳಲು ಬರುವ ಇಂತಹ ವ್ಯಕ್ತಿಗಳಲ್ಲೂ ಇಂತಹ ಕಾಮನ್ ಚಿತ್ರಗಳು ಸಾಕಷ್ಟುವಿರಬಹುದು. ಯಾಕೆಂದರೆ ಅವುಗಳನ್ನು ಜೂಮ್ ಮಾಡಿ ನೋಡುವುದಿಲ್ಲವಲ್ಲ.
 
ಏನೇ ಇರಲಿ, ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾಗ, ಸಚಿವರ 'ಕಾಮ'ನ್ ಚಿತ್ರ ವೀಕ್ಷಣೆ, ವಿರೋಧಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ. ತನ್ವೀರ್ ಶೇಠ್ ರಾಜೀನಾಮೆಗೆ ಬಿಗಿಪಟ್ಟು ಹಿಡಿಯುತ್ತಿದ್ದಾರೆ‌ ಸಾಮಾಜಿಕ ಜಾಲಾತಾಣಗಳಲ್ಲಿ ಮನಸ್ಸೋ ಇಚ್ಛೆಯಾಗಿ ಸಚಿವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
 
ಕೆಲವರು 'ಶಿಕ್ಷಣ ಸಚಿವರು ಮನೆಗೆ ಹೋಗ್ದೆ ಮೂರು ತಿಂಗಳಾಗಿದೆ. ಶಾಲೆಗೆ ಬಂದರೆ ಎಚ್ಚರಿಕೆಯಿಂದ ಇರಿ..!  ಎಂದು ಪೋಸ್ಟ್ ಮಾಡಿದ್ದರೆ, ಇನ್ನೂ ಕೆಲವರು 'ಜೂಮ್ ಮಾಡಿ ನೋಡಿಲ್ವಂತೆ ಪಾಪ.. ಬಿಟ್ಬಿಡಿ' ಎಂದು ವ್ಯಂಗ್ಯವಾಡುತ್ತಿದ್ದಾರೆ.
 
ಇವುಗಳ ನಡುವೆಯೇ ತನ್ವೀರ್ ಶೇಠ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆಯುವುದು ಬಹುತೇಕ ಖಚಿತವಾಗಿದೆ. ಯಾಕೆಂದರೆ ಕಳೆದ ಬಾರಿ ಬಿಜೆಪಿ ಮೂವರು ಸದಸ್ಯರ ಇಂತಹದ್ದೇ ಪ್ರಕರಣದಲ್ಲಿ ಸಿದ್ದರಾಮಯ್ಯನವರೇ ಮುಂಚೂಣಿಯಲ್ಲಿ ನಿಂತು, ಅವರ ರಾಜೀನಾಮೆ ಪಡೆಯಲು ಯಶಸ್ವಿಯಾಗಿದ್ದರು. ಅದೂ ಅಲ್ಲದೆ, ಇದೇ 21ರಂದಿಂದ ಅಧಿವೇಶನ ನಡೆಯಲಿದ್ದು, ಶೇಠ್ ಅವರ ರಾಜೀನಾಮೆ ಪಡೆಯದಿದ್ದರೆ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎನ್ನುವ ಆತಂಕ ಕೂಡಾ ಸಿಎಂ ಕಾಡುತ್ತಿದೆ.

ವೆಬ್ದುನಿಯಾವನ್ನು ಓದಿ