ಛತ್ರಪತಿ ಶಿವಾಜಿ ನೆನಪಿನಲ್ಲಿ ಬೃಹತ್ ಕಟ್ಟಡ ನಿರ್ಮಾಣ: ನಿತಿನ್ ಗಡ್ಕರಿ

ಮಂಗಳವಾರ, 21 ನವೆಂಬರ್ 2023 (17:00 IST)
ಮುಂಬೈಯಲ್ಲಿ ಬುರ್ಜಾ ಖಾಲೀಫಾ ಕಟ್ಟಡ ನಿರ್ಮಾಣದ ಬಗ್ಗೆ ನಾನು ಘೋಷಣೆ ಮಾಡುತ್ತಿಲ್ಲ. ಆದರೆ ನನ್ನ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಮುಂಬೈಯಲ್ಲಿ ಬುರ್ಜಾ ಖಾಲೀಫಾಗಿಂತ ವಿಶ್ವದಲ್ಲಿಯೇ ಅತಿ ಎತ್ತರವಾದ ಬೃಹತ್ ಕಟ್ಟಡ ನಿರ್ಮಾಣವಾಗಬೇಕು. ಅದಕ್ಕೆ ಛತ್ರಪತಿ ಶಿವಾಜಿ ಮಹಾರಾಜಾ ಟವರ್ ಎಂದು ಹೆಸರಿಡಬೇಕು ಎನ್ನುವುದು ನನ್ನ ಕನಸಾಗಿದೆ ಎಂದು ಹೇಳಿದ್ದಾರೆ.
 
ದುಬೈಯಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಷ್ಠಿತ ಬುರ್ಜ ಖಾಲೀಫಾ ಕಟ್ಟಡದಂತೆ ಮುಂಬೈಯಲ್ಲಿ ಮರಾಠಾ ಯೋಧ ಛತ್ರಪತಿ ಶಿವಾಜಿ ನೆನಪಿನಲ್ಲಿ ಬೃಹತ್ ಕಟ್ಟಡ ನಿರ್ಮಿಸಬೇಕು ಎನ್ನುವುದೇ ನನ್ನ ಬಯಕೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
 
ಕಟ್ಟಡದ ಮೊದಲು 30 ಅಂತಸ್ತುಗಳು ಸಮಾರಂಭ ಕಾರ್ಯಗಳಿಗಾಗಿ, ನಂತರ 30 ಅಂತಸ್ತು ರೆಸ್ಟುರಾಂಟ್‌ಗಳಿಗಾಗಿ, ತದನಂತರದ 30 ಅಂತಸ್ತು ಹೋಟೆಲ್‌ಗಳಿಗಾಗಿ, ಉಳಿದ 20 ಅಂತಸ್ತುಗಳು ಮಾಲ್‌ಗಳಿಗಾಗಿ ಮೀಸಲಿಡಬೇಕು. ಪಾರ್ಕಿಂಗ್‌ಗಾಗಿ ಅಂಡರ್‌ಗ್ರೌಂಡ್ ನಿರ್ಮಿಸಬೇಕು ಎಂದು ತಮ್ಮ ಕನಸಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.
     
ಬುರ್ಜ ಖಾಲೀಫಾ ವಿಶ್ವದಲ್ಲಿಯೇ ಅತಿ ಎತ್ತರದ (2722 ಅಡಿ ಎತ್ತರ) ಕಟ್ಟಡವಾಗಿದೆ. ಕಟ್ಟಡದ ತುತ್ತತುದಿಯಲ್ಲಿ ಶಿವಾಜಿ ಮಹಾರಾಜ್ ಅವರ ಆರ್ಟ್ ಗ್ಯಾಲರಿ, ಮ್ಯೂಜಿಕಲ್ ಫೌಂಟೇನ್, ಲೈಟ್‌ಗಳು ಮತ್ತು ಪರಿಶುದ್ಧವಾದ ನೀರಿರಬೇಕು ಎಂದು ಹೇಳಿದ್ದಾರೆ
 
ಅಂಡಮಾನ್ ಮತ್ತು ಮಾರಿಷಿಯಸ್‌ನಲ್ಲಿರುವ ಸಮುದ್ರದಂತೆ ಮುಂಬೈ ಸಮುದ್ರದ ನೀರು ಕೂಡಾ ಪರಿಶುದ್ಧವಾಗಿರಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ