ಸ್ವಾತಂತ್ರ್ಯ ದಿನದಂದು ಶಾಲಾ ಮಕ್ಕಳ ನೃತ್ಯ ಪ್ರದರ್ಶನದಲ್ಲಿ ದಕ್ಷ ಅಧಿಕಾರಿಗಳ ಪೋಟೋ ಪ್ರದರ್ಶನಕ್ಕೆ ಡಿಕೆಶಿ ಗರಂ ಆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ದಿವಂಗತ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ, ನನ್ನ ಮಗನ ಪೋಟೋ ಹಿಡಿದುಕೊಂಡರೇ ಏನು ಪ್ರಯೋಜನ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪೋಟೋ ಹಿಡಿದುಕೊಳ್ಳಬೇಕಿತ್ತು. ಆಗ, ದೇಶಕ್ಕೆ ಒಳ್ಳೆಯದಾಗುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಕೋಲಾರ ಜಿಲ್ಲೆಯ ಕೆಂಬೋಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಹಣ ನೀಡಿ ವೋಟು ಹಾಕಿಸಿಕೊಂಡು, ಕೋಟಿ ಕೋಟಿ ಹಣವನ್ನು ಲೂಟಿಗೈಯುವವರ ಪೋಟೋ ಹಾಕಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನದಂದು ಶಾಲಾ ಮಕ್ಕಳ ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮಕ್ಕಳು ನೃತ್ಯದಲ್ಲಿ ಸ್ವಾತಂತ್ರ್ಯ ಪೂರ್ವ ಹೋರಾಟಗಾರರ ಭಾವಚಿತ್ರವನ್ನು ಪ್ರದರ್ಶಿಸುವ ಬದಲು ಡಿ.ಕೆ.ರವಿ ಹಾಗೂ ಕಲ್ಲಪ್ಪ ಹಂಡಿಭಾಗ್ ಅವರ ಭಾವಚಿತ್ರವನ್ನು ಪ್ರದರ್ಶನ ಮಾಡಿದ್ದಾರೆ. ಆತ್ಮಹತ್ಯೆಗೆ ಶರಣಾಗಿರುವವರ ಭಾವಚಿತ್ರ ಪ್ರದರ್ಶನ ಮಾಡವುದು ಸರಿಯಲ್ಲ. ಆತ್ಮಹತ್ಯೆಗೆ ಶರಣಾಗುವವರು ರಣಹೇಡಿಗಳು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು.