ಮಗ್ಗುಲ ಗ್ರಾಮಕ್ಕೆ ನಿರಂತರ ಕಾಡಾನೆ ಧಾಳಿ ಬೆಳೆ ನಾಶಹತಾಶನಾದ ರೈತ

ಭಾನುವಾರ, 14 ನವೆಂಬರ್ 2021 (20:56 IST)
ರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದಲ್ಲಿ ಭತ್ತದ ಬೆಳೆಗೆ ನಿರಂತರವಾಗಿ ಕಾಡಾನೆಗಳ ಹಿಂಡು ಧಾಳಿ ಮಾಡಿ ಕಟಾವಿನ ಸಮೀಪದಲ್ಲಿರುವ ಬೆಳೆಯನ್ನು ನಾಶಮಾಡಿದ ಪರಿಣಾಮ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಹತಾಶನಾಗಿದ್ದಾನೆ.
ನೆನ್ನೆ ದಿನ ಗ್ರಾಮದ ಕೃಷಿಕರಾದ ಪುಲಿಯಂಡ ಜಗದೀಶ್ ಮತ್ತು ಅಯ್ಯಪ್ಪನವರ ಭತ್ತದ ಗದ್ದೆಗೆ ಧಾಳಿ ಮಾಡಿದ ಕಾಡಾನೆಗಳು ಇನ್ನೇನು  ಮುಂದಿನ ಹತ್ತು ದಿನಗಳಲ್ಲಿ ಕಟಾವು ಮಾಡಬೇಕಿದ್ದ ಬೆಳೆಯನ್ನು ನಾಶ ಮಾಡಿವೆ.ಎರಡು ತಿಂಗಳ ಹಿಂದೆ ಕೂಡ ಇಲ್ಲಿ ಕಾಡಾನೆಗಳು ದಾಳಿ ಮಾಡಿ ನಷ್ಟ ಮಾಡಿದ್ದವು.ಈಗ ಪುನಃ ಗದ್ದೆಯನ್ನು ತೊಯ್ದಾಡಿವೆ.ಹೀಗಾದರೆ ಭತ್ತದ ಕೃಷಿಯನ್ನು ಮಾಡುವುದು ಹೇಗೆ ಎಂಬ ಮೂಲಭೂತ ಪ್ರಶ್ನೆ ಎದುರಾಗಿದೆ ಎಂದು ಸುಮಾರು ಹತ್ತು ಏಕರೆ ಪ್ರದೇಶದಲ್ಲಿ ಭತ್ತ ಬೆಳೆದಿರುವ ಪುಲಿಯಂಡ ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ.ಲಾಭ ನಷ್ಟಗಳ ಸಮತೋಲನದಲ್ಲಿ ಭತ್ತದ ಕೃಷಿ ಮಾಡುತ್ತಿದ್ದು  ಇನ್ನು ಮುಂದಕ್ಕೆ ಭತ್ತದ ಕೃಷಿಗೆ ಎಳ್ಳು ನೀರು ಬಿಡುವುದೊಂದೇ ಪರಿಹಾರ ಮಾರ್ಗ ಎಂದು ಮತ್ತೋರ್ವ ಕೃಷಿಕ ಪುಲಿಯಂಡ ಅಯ್ಯಪ್ಪ  ನೋವನ್ನು ತೋಡಿಕೊಂಡರು.
ಮಾಹಿತಿಯನ್ನು ಸ್ಥಳೀಯರು ವಲಯ ಅರಣ್ಯಾಧಿಕಾರಿ ದೇವಯ್ಯನವರಿಗೆ ತಿಳಿಸಿದ  ತಕ್ಷಣವೇ ದೌಡಾಯಿಸಿದ ಸಹಾಯಕ ವಲಯ ಅರಣ್ಯ ಅಧಿಕಾರಿ ಶ್ರೀಶೈಲ,ಚಂದ್ರಶೇಖರ್ ಸೇರಿದಂತೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.
ಗ್ರಾಮಸ್ಥರುಗಳಾದ ಕುಪ್ಪಚ್ಚಿರ ಮದನ್ ,ಸತೀಶ್ ಪುಲಿಯಂಡ ಡೆನ್ನಿ ಮತ್ತು ಡಾಲು ಸೇರಿದಂತೆ ಮತ್ತಿತರರು ಸ್ಥಳದಲ್ಲಿ ಮಾಹಿತಿ ಒದಗಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ