ಮಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಶೋಧ ನಡೆಸುತ್ತಿರುವ ಎಸ್ಐಟಿ ತಂಡ ಈಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸದ್ಯಕ್ಕೆ ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ದೂರುದಾರ ದೂರು ನೀಡಿದ ಹಿನ್ನಲೆಯಲ್ಲಿ ಸರ್ಕಾರ ಎಸ್ಐಟಿ ರಚಿಸಿ ತನಿಖೆಗೆ ಮುಂದಾಗಿತ್ತು. ಆದರೆ ಆತ ಗುರುತಿಸಿದ ಸ್ಥಳಗಳಲ್ಲಿ ಅಸ್ಥಿಪಂಜರ ಸಿಕ್ಕಿರಲಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ಟೀಕೆ ನಡೆಸಿತ್ತು. ಇದು ಹಿಂದೂ ದೇವಾಲಯಗಳ ವಿರುದ್ಧ ನಡೆಸುತ್ತಿರುವ ಪಿತೂರಿ ಎಂದಿತ್ತು.
ಇದೀಗ ಎಸ್ಐಟಿ ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಶೋಧ ಕಾರ್ಯಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಕಾರ್ಮಿಕರನ್ನು ಬಳಸಲಾಗಿತ್ತು. ಈಗ ಅವರೆಲ್ಲರ ಸಹಿ ಪಡೆದು ಎಸ್ಐಟಿ ತಂಡ ವಾಪಸ್ ಕಳುಹಿಸಿದೆ. ಎಷ್ಟು ಕಡೆ ಶೋಧ ಆಗಿದೆ ಎಂದು ಸಹಿ ಹಾಕಿಸಿಕೊಳ್ಳಲಾಗಿದೆ.
ಕೇವಲ 6 ನೇ ಪಾಯಿಂಟ್ ನಲ್ಲಿ ಮಾತ್ರ ಅಸ್ಥಿಪಂಜರ ಸಿಕ್ಕಿತ್ತು. ಆದರೂ ಅದು ಆತ ಹೇಳಿದಂತೆ ಮಹಿಳೆಯ ಮೃತದೇಹದ್ದಾಗಿರಲಿಲ್ಲ. ಉಳಿದ ಯಾವುದೇ ಸ್ಥಳಗಳಲ್ಲಿ ಎಷ್ಟೇ ಮಣ್ಣು ಅಗೆದರೂ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಎಸ್ಐಟಿ ಮುಂದಿನ ನಡೆ ಏನು ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ.