ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಟೆಂಪಲ್ ರನ್ ಮಾಡಿದ ಡಿಕೆ ಶಿವಕುಮಾರ್

Krishnaveni K

ಸೋಮವಾರ, 7 ಅಕ್ಟೋಬರ್ 2024 (16:57 IST)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ತೆರೆಮರೆಯಲ್ಲಿ ಚರ್ಚೆ, ಕಸರತ್ತುಗಳು ನಡೆಯುತ್ತಿರುವ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಪತ್ನಿ ಜೊತೆ ಟೆಂಪಲ್ ರನ್ ನಡೆಸಿದ್ದಾರೆ.

ಇಂದು ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ಸನ್ನಿಧಾನಕ್ಕೆ ಪತ್ನಿ ಜೊತೆ ಬಂದ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದಲ್ಲಿ ಕೆಲವು ಹೊತ್ತು ಕಳೆದ ಡಿಕೆ ಶಿವಕುಮಾರ್ ವಿಶೇಷ ಪೂಜೆ, ಪ್ರಾರ್ಥನೆ ನಡೆಸಿದರು. ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್ ನಡೆಸಿದ್ದು ವಿಶೇಷವಾಗಿತ್ತು.

ಈ ವೇಳೆ ಮಾಧ್ಯಮಗಳು ಅವರನ್ನು ಸುತ್ತುವರಿದರೂ ರಾಜಕೀಯದ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ದೇವಾಲಯದ ಬಗ್ಗೆ ಮಾತ್ರ ಮಾತನಾಡಿದರು. ದೇವಾಲಯ ಸಾಕಷ್ಟು ಪುರಾತನವಾಗಿದ್ದು, ಇಲ್ಲಿನ ವಾಸ್ತು ಶಿಲ್ಪ ನಿಜಕ್ಕೂ ಅದ್ಭುತವಾಗಿದೆ. ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ಖುಷಿ ನೀಡಿದೆ ಎಂದಷ್ಟೇ ಹೇಳಿದರು.

ಇನ್ನೊಂದೆಡೆ ರಾಜ್ಯದಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲವು ದಲಿತ ನಾಯಕರು ಸಿಎಂ ಬದಲಾವಣೆಗೆ ಕಸರತ್ತು ನಡೆಸುತ್ತಿದ್ದಾರೇನೋ ಎಂಬ ಅನುಮಾನಗಳು ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸತೀಶ್ ಜಾರಕಿಹೊಳಿ ಜೊತೆ ಡಿಕೆ ಸುರೇಶ್, ಜಿ ಪರಮೇಶ್ವರ್ ಸೇರಿದಂತೆ ಅನೇಕರು ಚರ್ಚೆ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ